Tuesday, June 10, 2014

JUNE 14- WORLD BLOOD DONORS DAY





    ವಿಶ್ವ ರಕ್ತದಾನಿಗಳ ದಿನಾಚರಣೆ 

ಮಾತೆಯರನ್ನು ರಕ್ಷಿಸಲು ಸುರಕ್ಷಿತ ರಕ್ತ 

ನಮ್ಮ ದೇಶದಲ್ಲಿ ಪ್ರತಿನಿತ್ಯ ೮೦೦ ಕ್ಕೂ ಅಧಿಕ ಮಾತೆಯರು ಗರ್ಭಧರಿಸಿದ ಅಥವಾ ಹೆರಿಗೆಯ ಸಂದರ್ಭದಲ್ಲಿ ಉದ್ಭವಿಸಬಲ್ಲ ಸಂಕೀರ್ಣ ಸಮಸ್ಯೆಗಳಿಂದ ಮೃತಪಡುತ್ತಿದ್ದಾರೆ. ಹೆರಿಗೆಯ ಸಂದರ್ಭದಲ್ಲಿ ಮತ್ತು ಹೆರಿಗೆಯ ನಂತರ ಸಂಭವಿಸಬಹುದಾದ ತೀವ್ರ ರಕ್ತಸ್ರಾವವು ಅನೇಕ ಮಾತೆಯರ ಮರಣ, ಮಾರಕತೆ ಮತ್ತು ದೀರ್ಘಕಾಲೀನ ವೈಕಲ್ಯಗಳಿಗೆ ಪ್ರಮುಖ ಕಾರಣವೆನಿಸುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈ ವರ್ಷದ ವಿಶ್ವ ರಕ್ತದಾನಿಗಳ ದಿನಾಚರಣೆಯ ಸಂದರ್ಭದಲ್ಲಿ, ಜನಸಾಮಾನ್ಯರಲ್ಲಿ ಈ ಗಂಭೀರ ಸಮಸ್ಯೆಯ ಬಗ್ಗೆ ಅರಿವನ್ನು ಮೂಡಿಸುವ " ಮಾತೆಯರನ್ನು ರಕ್ಷಿಸಲು ಸುರಕ್ಷಿತ ರಕ್ತ" ಎನ್ನುವ ಘೋಷಣೆಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಹಮ್ಮಿಕೊಂಡಿವೆ. ಅಮಾಯಕ ಮಾತೆಯರ ಮರಣದ ಸಂಭಾವ್ಯತೆಯನ್ನು ತಡೆಗಟ್ಟಲು ಸೂಕ್ತ ಸಮಯದಲ್ಲಿ ಸುರಕ್ಷಿತ ಮತ್ತು ಅವಶ್ಯಕ ಪ್ರಮಾಣದ ರಕ್ತ ಅಥವಾ ರಕ್ತದ ಘಟಕಗಳ ಲಭ್ಯತೆಯ ಅವಶ್ಯಕತೆಯನ್ನು ಜಗತ್ತಿನ ಪ್ರತಿಯೊಂದು ರಾಷ್ಟ್ರಗಳ ಪ್ರಜೆಗಳಿಗೆ ತಿಳಿಸುವ ಉದ್ದೇಶದಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ವಿಶ್ವ ರಕ್ತದಾನಿಗಳ ದಿನ 

ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ೨೦೦೪ ರ ಜೂನ್ ೧೪ ರಂದು ಮೊಟ್ಟಮೊದಲಬಾರಿಗೆ ಆಚರಿಸಲಾಗಿತ್ತು. ತದನಂತರ ವರ್ಷಂಪ್ರತಿ ಪ್ರಪಂಚದ ಪ್ರತಿಯೊಂದು ರಾಷ್ಟ್ರಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಕ್ತದಾನದ ಮಹತ್ವ ಹಾಗೂ ಅವಶ್ಯಕತೆ, ಸುರಕ್ಷಿತ ರಕ್ತ ಹಾಗೂ ರಕ್ತದ ಉತ್ಪನ್ನಗಳು, ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂಪ್ರೇರಿತ ರಕ್ತದಾನದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳೊಂದಿಗೆ, ಅಸಂಖ್ಯ ಪ್ರಾಣಗಳನ್ನು ಉಳಿಸಿರುವ ರಕ್ತದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. 

ಸುರಕ್ಷಿತ ರಕ್ತ ಮತ್ತು ರಕ್ತದ ಘಟಕಗಳ ಪೂರಣವು ಲಕ್ಷಾಂತರ ಜನರ ಪ್ರಾಣವನ್ನು ಉಳಿಸುತ್ತಿದೆ. ಪ್ರಾಣಾಪಾಯದ ಸ್ಥಿತಿಯಲ್ಲಿರುವವರನ್ನು ರಕ್ಷಿಸುವುದರೊಂದಿಗೆ, ರಕ್ತದಾನಿಗಳನ್ನು ಸುದೀರ್ಘಕಾಲ ಆರೋಗ್ಯವಂತರಾಗಿ ಜೀವಿಸಲು ನೆರವಾಗುತ್ತದೆ. ಜೊತೆಗೆ ಸಂಕೀರ್ಣ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಲು ಹಾಗೂ ಬಾಣಂತಿಯರು ಮತ್ತು ನವಜಾತ ಶಿಶುಗಳನ್ನು ಪ್ರಾಣಾಪಾಯದ ಸ್ಥಿತಿಯಿಂದ ಪಾರುಮಾಡುತ್ತದೆ. 

ಮಹತ್ವ 

ಕಾರ್ಲ್ ಲ್ಯಾಂಡ್ ಸ್ಟೈನರ್ ನಾಮಾಂಕಿತ ವೈದ್ಯ ಹಾಗೂ ಬಯಾಲಜಿಸ್ಟ್ ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಆಧುನಿಕ ರಕ್ತಪೂರಣಾ ವಿಧಾನದ ಅನ್ವೇಷಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದ ಈ ವೈದ್ಯರು, ೧೯೦೧ ರಲ್ಲಿ ರಕ್ತದ ಎ, ಬಿ, ಓ ಗುಂಪುಗಳನ್ನು ಪತ್ತೆಹಚ್ಚಿದ ಹಾಗೂ ಆಧುನಿಕ ಪದ್ದತಿಯ ಪ್ರಭೇದಗಳನ್ನು ಅಭಿವೃದ್ಧಿಪಡಿಸಿದ ಸಂಶೋಧಕರೂ ಹೌದು. ೧೯೩೭ ರಲ್ಲಿ ಅಲೆಕ್ಸಾಂಡರ್ ವೈನರ್ ಎನ್ನುವ ಸಂಶೋಧಕರೊಂದಿಗೆ " ರೀಸಸ್ ಫ್ಯಾಕ್ಟರ್ " ಎನ್ನುವ ಅಂಶವನ್ನು ಗುರುತಿಸುವ ಮೂಲಕ, ರೋಗಿಯ ಪ್ರಾಣಕ್ಕೆ ಯಾವುದೇ ಅಪಾಯ ಸಂಭವಿಸದಂತೆ ರಕ್ತಪೂರಣ ಮಾಡಲು ಇವರು ಕಾರಣಕರ್ತರೆನಿಸಿದ್ದರು.

ಈ ವೈದ್ಯರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ, ಇವರ ಜನ್ಮದಿನವನ್ನು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸುವ ಮೂಲಕ ಗೌರವಿಸಲಾಗಿದೆ. 

ದಾನಿಗಳ - ರಕ್ತದ ಕೊರತೆ 


ಪ್ರಸ್ತುತ ವಿಶ್ವಾದ್ಯಂತ ಕಾರಣಾಂತರಗಳಿಂದ ಪ್ರಾಣಾಪಾಯದ ಸ್ಥಿತಿಯಲ್ಲಿರುವ ರೋಗಿಗಳ ಪಾಲಿಗೆ ಸಾಕ್ಷಾತ್ " ಸಂಜೀವಿನಿ " ಎನಿಸಬಲ್ಲ ರಕ್ತದ ಪೂರೈಕೆಯ ಪ್ರಮಾಣವು, ಇದರ ಬೇಡಿಕೆಯ ಶೇ. ೩೦ ರಷ್ಟಿದೆ. ರಕ್ತದ ಪೂರೈಕೆಯ ಪ್ರಮಾಣದ ಕೊರತೆಯಿಂದಾಗಿಯೇ ಅನೇಕ ಜನರು ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದಾರೆ. ನಮ್ಮ ದೇಶವೂ ಇದಕ್ಕೆ ಅಪವಾದವೆನಿಸಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ೧೮ ರಿಂದ ೫೫ ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡುವ ಮೂಲಕ, ತಮ್ಮ ಆರೋಗ್ಯವನ್ನು ಉನ್ನತಮಟ್ಟದಲ್ಲಿ ಕಾಪಾಡಿಕೊಳ್ಳುವುದರೊಂದಿಗೆ, ಸಾವಿನ ದವಡೆಗಳಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬನ ಜೀವವನ್ನು ಉಳಿಸಬಹುದಾಗಿದೆ. 


ಪ್ರಸ್ತುತ ವಿಶ್ವದ ೬೦ ಕ್ಕೂ ಅಧಿಕ ರಾಷ್ಟ್ರಗಳಲ್ಲಿ " ರಕ್ತಪೂರಣ ಸೇವೆ " ಯು ಸ್ವಯಂಪ್ರೇರಿತ ದಾನಿಗಳ ನೆರವಿನಿಂದಲೇ ನಡೆಯುತ್ತಿದ್ದು, ೨೦೦೨ ರಲ್ಲಿ ಇದು ಕೇವಲ ೩೯ ರಾಷ್ಟ್ರಗಳಿಗೆ ಸೀಮಿತವಾಗಿತ್ತು. ೨೦೦೨ ರ ಮೆಲ್ಬೋರ್ನ್ ಘೋಷಣೆಯಂತೆ ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ೨೦೨೦ ಕ್ಕೆ ಮುನ್ನ, ರಕ್ತದಾನದ ಸೇವೆಯನ್ನು ಶತಪ್ರತಿಶತ ಯಾವುದೇ ಫಲಾಪೇಕ್ಷೆಯಿಲ್ಲದೆ ರಕ್ತವನ್ನು ನೀಡುವ ದಾನಿಗಳಿಂದಲೇ ನಡೆಯುವಂತೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. 

ಭಾರತವೂ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ರಕ್ತಪೂರಣದ ಅವಶ್ಯಕತೆ ಇರುವವರಿಗೆ ಬೇಕಾಗುವಷ್ಟು ಪ್ರಮಾಣದ ರಕ್ತವನ್ನು ದಾನಿಗಳಿಂದಲೇ ಪಡೆಯಲಾಗುತ್ತಿದೆ. ಕೆಲ ಸಂದರ್ಭಗಳಲ್ಲಿ ಸಮೀಪದ ಸಂಬಂಧಿಗಳಿಂದ ಮತ್ತು ಅನಿವಾರ್ಯವೆನಿಸಿದಲ್ಲಿ ಹಣವನ್ನು ಪಡೆದು ರಕ್ತವನ್ನು ನೀಡುವ ವೃತ್ತಿಪರ ದಾನಿಗಳಿಂದ ಪಡೆಯಲಾಗುತ್ತದೆ. ಇದೇ ದಶಕದ ಅಂತ್ಯಕ್ಕೆ ಮುನ್ನ, ಜಗತ್ತಿನ ಪ್ರತಿಯೊಂದು ರಾಷ್ಟ್ರಗಳಲ್ಲಿ ಸ್ವಯಂಪ್ರೇರಿತ ರಕ್ತದಾನದ ಮೂಲಕ ಅವಶ್ಯಕ ಪ್ರಮಾಣದ ರಕ್ತವನ್ನು ಪಡೆಯುವ ಪದ್ಧತಿ ಜಾರಿಗೆ ಬರಬೇಕು ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ಆಶಯವಾಗಿದೆ. 

ನೀವೇನು ಮಾಡಬಹುದು 

ನೀವು ಧೃಢವಾಗಿ ನಂಬಿರುವಂತೆ ಕಾರಣಾಂತರಗಳಿಂದ ಪ್ರಾಣಾಪಾಯದ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬನನ್ನು ಕೇವಲ ವೈದ್ಯರು ಮಾತ್ರ ಉಳಿಸಬಲ್ಲರು ಎನ್ನುವುದು ನಿಜವಲ್ಲ. ಇಂತಹ ವ್ಯಕ್ತಿಗಳ ಜೀವವನ್ನು ಉಳಿಸಲು ನಿಮ್ಮಿಂದಲೂ ಸಾಧ್ಯ ಎನ್ನುವುದು ಪ್ರಾಯಶಃ ನಿಮಗೂ ತಿಳಿದಿರಲಾರದು. ನೀವು ಸ್ವಯಂಪ್ರೇರಿತರಾಗಿ ನೀಡುವ ಒಂದು ಯೂನಿಟ್ ರಕ್ತವು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ವ್ಯಕ್ತಿಗಳ ಪ್ರಾಣವನ್ನು ಉಳಿಸಲು ಅತ್ಯಂತ ಉಪಯುಕ್ತ ಎನಿಸುವುದು. 

ನಿಮಗೆ ೧೮ ವರ್ಷ ವಯಸ್ಸಾದಂದಿನಿಂದ ೬೦ ವಯಸ್ಸಿನ ತನಕ, ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತಿದ್ದಲ್ಲಿ ೫೦೦ ಕ್ಕೂ ಅಧಿಕ ಜನರ ಪ್ರಾಣಗಳನ್ನು ಉಳಿಸಬಹುದಾಗಿದೆ. ತನ್ಮೂಲಕ ಧಾರಾಳ ಮಾನಸಿಕ ಸಂತೃಪ್ತಿಯೊಂದಿಗೆ ಒಂದಿಷ್ಟು ಪುಣ್ಯವನ್ನೂ ಅನಾಯಾಸವಾಗಿ ಗಳಿಸಬಹುದಾಗಿದೆ. ಇದರೊಂದಿಗೆ  ನಿಮ್ಮ ಆರೋಗ್ಯದ ಮಟ್ಟವನ್ನು ಉನ್ನತ ಸ್ತರದಲ್ಲಿ ಕಾಪಾಡಿಕೊಳ್ಳಬಹುದಾಗಿದೆ.

ರಕ್ತದಾನ - ಶ್ರೇಷ್ಠ ದಾನ 

ಸಹಸ್ರಾರು ವರ್ಷಗಳಿಂದ ಭಾರತದ ಹಿಂದೂ ಮತ್ತು ಅನ್ಯ ಧರ್ಮೀಯರು ಸಂದರ್ಭೋಚಿತವಾಗಿ ವಿವಿಧರೀತಿಯ ದಾನಗಳನ್ನು ನೀಡುವ ಪದ್ಧತಿ ರೂಢಿಯಲ್ಲಿದೆ. ಅರ್ಹ ವ್ಯಕ್ತಿಗಳಿಗೆ ನೀಡುವ ದಾನದಿಂದ ತಮ್ಮ ಮತ್ತು ತಮ್ಮ ಕುಟುಂಬದ ಸದಸ್ಯರಿಗೆ ಒಂದಿಷ್ಟು ಪುಣ್ಯವೂ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆಯೂ ನಮ್ಮ ದೇಶದಲ್ಲಿ ಇಂದಿಗೂ ಜೀವಂತವಾಗಿದೆ. ಆದರೆ ಇವೆಲ್ಲಾ ದಾನಗಳಿಗಿಂತ ಮಿಗಿಲಾದ ಮತ್ತು ಸಾವಿನ ದವಡೆಗಳಲ್ಲಿ ಸಿಲುಕಿದವರನ್ನು ಬದುಕಿಸಬಲ್ಲ ಅತ್ಯಂತ ಶ್ರೇಷ್ಠ ದಾನವೇ ರಕ್ತದಾನ. ಅಕ್ಷರಶಃ " ಜೀವದಾನ " ಎನಿಸುವ ಈ ದಾನಕ್ಕೆ ಇತರ ಯಾವುದೇ ದಾನ ಸಾಟಿಯಲ್ಲ ಎನ್ನುವುದನ್ನು ಮರೆಯದಿರಿ. ಇಂದೇ ರಕ್ತದಾನ ಮಾಡಿ. 

ಡಾ. ಸಿ.ನಿತ್ಯಾನಂದ ಪೈ, ಪುತ್ತೂರು 





No comments:

Post a Comment