Tuesday, June 17, 2014

Water water everywhere.........!





 " ಜೀವಜಲ " ವನ್ನು ಅನಾವಶ್ಯಕವಾಗಿ ಪೋಲು ಮಾಡದಿರಿ 

ಕೇವಲ ಮೂರು ದಶಕಗಳ ಹಿಂದೆ ಹಗಲಿರುಳು ಸುರಿಯುತ್ತಿದ್ದ ಮುಂಗಾರು ಮಳೆಯು, ಕಾಲಕ್ರಮೇಣ ಕಡಿಮೆಯಾಗುತ್ತಾ ಬಂದು ವರುಷಗಳೇ ಸಂದಿವೆ.ಥಟ್ಟನೆ ಪ್ರಾರಂಭವಾಗಿ ಅಷ್ಟೇ ವೇಗದಲ್ಲಿ ಸುರಿದು ಮಾಯವಾಗುವ ಇಂದಿನ ಮಳೆಗಾಲ ಮತ್ತು ಹಿಂದೆ ಧೋ ಎಂದು ಸುರಿಯುತ್ತಿದ್ದ ಜಡಿಮಳೆಗೆ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಬೆಳಗಿನ ಜಾವ ಸೂರಿನ ಮೇಲೆ ಬೀಳುತ್ತಿದ್ದ ಮಳೆನೀರಿನ ಸದ್ದಿಗೆ ಎಚ್ಚರವಾಗುತ್ತಿದ್ದ ಮತ್ತು ಮಳೆಯ ಸದ್ದನ್ನು ಆಲಿಸುತ್ತಾ ನಿದ್ರೆಗೆ ಜಾರುತ್ತಿದ್ದ ದಿನಗಳು ಇದೀಗ ಕೇವಲ ನೆನಪುಗಳಾಗಿರುವುದು ಸತ್ಯ. ಅಂತೆಯೇ ಕೈಯ್ಯಲ್ಲಿ ಕೊಡೆಯನ್ನು ಹಿಡಿಯದೇ ಮನೆಯಿಂದ ಹೊರಹೋಗಲಾರದ ಸನ್ನಿವೇಶ ಇಂದಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ, ಕಾಂಕ್ರೀಟ್ ಕಾಡುಗಳ ನಿರ್ಮಾಣ, ಅರಣ್ಯ ನಾಶ, ಕೃಷಿಭೂಮಿಯನ್ನು ಅನ್ಯ ಉದ್ದೇಶಗಳಿಗಾಗಿ ಬಳಸುತ್ತಿರುವುದು ಮತ್ತು ಅನಿಯಂತ್ರಿತ ಪರಿಸರ ಪ್ರದೂಷಣೆಗಳೇ ಈ ರೀತಿಯ ಹವಾಮಾನದ ವ್ಯತ್ಯಯಗಳಿಗೆ ಕಾರಣವೆನಿಸುತ್ತಿವೆ. ಮುಂದಿನ ದಿನಗಳಲ್ಲಿ ಜಲಕ್ಷಾಮಕ್ಕೂ ಕಾರಣವೆನಿಸಬಲ್ಲ ಈ ಅಪಾಯಕಾರಿ ಸಮಸ್ಯೆಯನ್ನು ನಾವಿಂದು ಗಂಭೀರವಾಗಿ ಪರಿಗಣಿಸಿಲ್ಲ. 

ಕ್ಷಯಿಸುತ್ತಿರುವ ಮುಂಗಾರು ಮಳೆ 

ಈ ವರ್ಷ ಸುರಿಯಲಿರುವ ಮುಂಗಾರು ಮಳೆಯ ಪ್ರಮಾಣವು ಎಂದಿಗಿಂತ ಒಂದಿಷ್ಟು ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿತ್ತು. ಆದರೆ ಜೂನ್ ತಿಂಗಳಿನ ಎರಡು ವಾರಗಳು ಕಳೆದ ಬಳಿಕವೂ ಪೂರ್ಣಪ್ರಮಾಣದಲ್ಲಿ ಪ್ರತ್ಯಕ್ಷವಾಗದ ಮುಂಗಾರು ಮಳೆಯು ಮುಂದಿನ ತಿಂಗಳುಗಳಲ್ಲೂ ಇದೇ ರೀತಿಯಲ್ಲಿ ಸುರಿದಲ್ಲಿ, ಕೆಲವೇ ತಿಂಗಳುಗಳಲ್ಲಿ ನೀರಿನ ಕೊರತೆಯೊಂದಿಗೆ ಬರಗಾಲದ ಸಮಸ್ಯೆಯೂ ತಲೆದೋರುವ ಸಾಧ್ಯತೆಗಳಿವೆ. ಕೇಂದ್ರ ಸರ್ಕಾರವು ಇಂತಹ ಸಾಧ್ಯತೆಗಳನ್ನು ಎದುರಿಸಲು ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ ಈ ವಿಚಾರವನ್ನು ಅರಿತ ಬಳಿಕವೂ, ಅಧಿಕತಮ ಭಾರತೀಯರು ತಾವು ಪ್ರತಿನಿತ್ಯ ಪೋಲು ಮಾಡುತ್ತಿರುವ ನೀರಿನ ಪ್ರಮಾಣವನ್ನು ಕಡಿಮೆಮಾಡದೇ ಇದ್ದಲ್ಲಿ, ಕೆಲವೇ ವರ್ಷಗಳಲ್ಲಿ ಭಾರತದಲ್ಲಿ " ಜಲಕ್ಷಾಮ " ದ ಸಮಸ್ಯೆ ಉದ್ಭವಿಸುವುದರಲ್ಲಿ ಸಂದೇಹವಿಲ್ಲ. 

ಜಗತ್ತಿನ ಜಲ ಸಂಪನ್ಮೂಲದ ಶೇ. ೪ ರಷ್ಟನ್ನು ಹೊಂದಿರುವ ಭಾರತವು " ಜಲ ಸಮೃದ್ಧ " ದೇಶವಾಗಿತ್ತು. ಅಗಾಧ ಪ್ರಮಾಣದ ಜಲ ಸಂಪನ್ಮೂಲಗಳಿದ್ದರೂ, ೨೦೧೧ ರಲ್ಲಿ ನಮ್ಮ ದೇಶವು " ನೀರಿನ ಸಮಸ್ಯೆ " ಇರುವ ರಾಷ್ಟ್ರಗಳ ಯಾದಿಯಲ್ಲಿ ಸೇರ್ಪಡೆಗೊಂಡಿತ್ತು. ಈ ವಿಲಕ್ಷಣ ಸಮಸ್ಯೆಗೆ ಹಲವಾರು ಕಾರಣಗಳೂ ಇವೆ. 

ಬೇಡಿಕೆ - ಲಭ್ಯತೆ 

ಪ್ರಸ್ತುತ ಭಾರತದಲ್ಲಿ ನೀರಿನ ಬೇಡಿಕೆಯ ಪ್ರಮಾಣವು ೭೧೮ ಬಿಲಿಯನ್ (ಲಕ್ಷ ಕೋಟಿ) ಕ್ಯುಬಿಕ್ ಮೀಟರ್ ಗಳಾಗಿದ್ದು, ೨೦೨೫ ರಲ್ಲಿ ಈ ಪ್ರಮಾಣವು ೮೩೩ ಲಕ್ಷ ಕೋಟಿ ಕ್ಯುಬಿಕ್ ಮೀಟರ್  ತಲುಪಲಿದೆ. ಇದರಲ್ಲಿ ಕೃಷಿ ಜಮೀನಿನ ನೀರಾವರಿಗಾಗಿ ಬಳಸಲ್ಪಡುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ  ೫೫೭ ಬಿ.ಕ್ಯು.ಮೀ. ಗಳಾಗಿದ್ದು, ೨೦೫೦ ರಲ್ಲಿ ಇದು ೮೦೭ ಬಿ.ಕ್ಯು.ಮೀ. ಆಗಲಿದೆ. ದೇಶದ ಜನರ ಗೃಹ ಬಳಕೆಯ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೪೩ ಬಿ.ಕ್ಯು.ಮೀ. ಆಗಿದ್ದು, ೨೦೨೫ ರಲ್ಲಿ ೬೨ ಹಾಗೂ ೨೦೫೦ ರಲ್ಲಿ ೧೧೧ ಬಿ.ಕ್ಯು.ಮೀ. ತಲುಪಲಿದೆ. ಉದ್ದಿಮೆಗಳು ಬಳಸುತ್ತಿದ್ದ ನೀರಿನ ಪ್ರಮಾಣವು ೨೦೧೦ ರಲ್ಲಿ ಕೇವಲ ೩೭ ಬಿ.ಕ್ಯು.ಮೀ. ಆಗಿದ್ದು, ೨೦೨೫ ರಲ್ಲಿ ೬೭ ಮತ್ತು ೨೦೫೦ ರಲ್ಲಿ ೮೧ ಬಿ,ಕ್ಯು.ಮೀ. ಆಗಲಿದೆ. ಅದೇ ರೀತಿಯಲ್ಲಿ ವಿದ್ಯುತ್ ಉತ್ಪಾದನೆಗೆ ೨೦೧೦ ರಲ್ಲಿ ೧೯ ಬಿ.ಕ್ಯು.ಮೀ. ಬಳಕೆಯಾಗಿದ್ದು, ೨೦೨೫ ರಲ್ಲಿ ಇದು ೩ ಮತ್ತು ೨೦೫೦ ರಲ್ಲಿ ೭೦ ಬಿ.ಕ್ಯು.ಮೀ. ಮೀರಲಿದೆ. ಈ ರೀತಿಯಲ್ಲಿ ವಿವಿಧ ಉದ್ದೇಶಗಳಿಗಾಗಿ ನಮಗಿಂದು ಅಗಾಧ ಪ್ರಮಾಣದ ನೀರಿನ ಅವಶ್ಯಕತೆಯಿದ್ದರೂ, ದೇಶದ ಅನೇಕ ಭಾಗಗಳಲ್ಲಿ ಕಂಡುಬರುತ್ತಿರುವ ಜಲಕ್ಷಾಮದ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿದೆ. ಆದರೆ ನಮ್ಮ ದೇಶದಲ್ಲಿ ಸುರಿಯುವ ಮಳೆನೀರಿನ ಶೇ. ೬೫ ರಷ್ಟು ಪಾಲು, ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ. 

ಭಾರತವು ಒಂದು ವರ್ಷದಲ್ಲಿ ೨೧೦ ಬಿ.ಕ್ಯು.ಮೀ. ಗಿಂತಲೂ ಅಧಿಕ ಪ್ರಮಾಣದ ಅಂತರ್ಜಲವನ್ನು ಬಳಸುತ್ತಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎನ್ನಲಾಗಿದೆ. ನಮ್ಮ ದೇಶದಲ್ಲಿನ ಶೇ. ೬೦ ರಷ್ಟು ನೀರಾವರಿ ಜಮೀನಿಗೆ ಇದೇ ಅಂತರ್ಜಲವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ದೇಶದ ಶೇ ೬೦ ಕ್ಕೂ ಅಧಿಕ ಜಿಲ್ಲೆಗಳಲ್ಲಿ ನೀರಿನ ಕೊರತೆ ಬಾಧಿಸುತ್ತಿದೆ. 

೨೦೧೦ ರಲ್ಲಿ ಭಾರತದ ಜನಸಂಖ್ಯೆಯು ೧,೦೨೯ ದಶಲಕ್ಷವಾಗಿದ್ದು, ಅಂದಿನ ನೀರಿನ ಲಭ್ಯತೆಯ  ಪ್ರಮಾಣವು ಒಂದು ವರ್ಷದಲ್ಲಿ ತಲಾ ೧,೮೧೬ ಕ್ಯು.ಮೀಟರ್ ಆಗಿತ್ತು. ೨೦೧೧ ರಲ್ಲಿ ಜನಸಂಖ್ಯೆ ೧,೨೧೦ ದಶಲಕ್ಷ ಹಾಗೂ ನೀರಿನ ಲಭ್ಯತೆಯ ಪ್ರಮಾಣವು ೧,೫೪೫ , ೨೦೨೫ ರಲ್ಲಿ ಜನಸಂಖ್ಯೆ ೧,೩೯೪ (ಅಂದಾಜು) ದ.ಲ. ಮತ್ತು ಲಭ್ಯತೆ ೧,೩೪೦ ಮತ್ತು ೨೦೫೦ ರಲ್ಲಿ ಜನಸಂಖ್ಯೆ ೧,೬೪೦ (ಅಂದಾಜು) ದ.ಲ. ಮತ್ತು ಲಭ್ಯತೆ ೧,೧೪೦ ಕ್ಯು.ಮೀ. ತಲುಪಲಿದೆ!. ಅರ್ಥಾತ್, ನೀರಿನ ಲಭ್ಯತೆಯ ಪ್ರಮಾಣವು ಮುಂದಿನ ವರ್ಷಗಳಲ್ಲಿ ಕಡಿಮೆಯಾಗುತ್ತಾ ಹೋಗಲಿದೆ. 

ಕಲುಷಿತ ನೀರು 

ದೇಶದಲ್ಲಿನ ಉದ್ದಿಮೆಗಳು ಸ ತಾವು ಬಳಸಿ ವಿಸರ್ಜಿಸುವ ಶೇ. ೯೦ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸಿ ನದಿಗಳಿಗೆ ವಿಸರ್ಜಿಸುತ್ತಿವೆ. ಆದರೆ ಈ ಶುದ್ಧೀಕರಿಸಿದ ಕಲುಷಿತ ನೀರು ಪರಿಸರಸ್ನೇಹಿ ಮಾನದಂಡಗಳಿಗೆ ಅನುಗುಣವಾಗಿಲ್ಲ. ನಿಜ ಹೇಳಬೇಕಿದ್ದಲ್ಲಿ ಎಲ್ಲ ನಗರ - ಪಟ್ಟಣಗಳ ಚರಂಡಿಗಳಲ್ಲಿ ಹರಿಯುವ ಕೊಳಚೆ ನೀರನ್ನು ಸ್ನಾನಕ್ಕೆ ಯೋಗ್ಯವಾಗಿರುವಷ್ಟು ಶುದ್ಧೀಕರಿಸಲೇಬೇಕು. ಆದರೆ ನಮ್ಮ ದೇಶದಲ್ಲಿ ಇಂತಹ ನೀತಿ ನಿಯಮಗಳನ್ನು ಜಾರಿಗೊಳಿಸುವ ಮತ್ತು ಅನುಷ್ಠಾನಿಸುವ ಇಚ್ಛಾಶಕ್ತಿ ನಮ್ಮನ್ನಾಳುವವರಲ್ಲಿ ಇಲ್ಲ. 

ಭಾರತದ ಶೇ. ೭೦ ರಷ್ಟು ಪ್ರಮಾಣದ ಜಲಪ್ರದೂಷಣೆಗೆ ನಗರ - ಮಹಾನಗರಗಳು ಉತ್ಪಾದಿಸುತ್ತಿರುವ ತ್ಯಾಜ್ಯಗಳೇ ಕಾರಣವೆನಿಸಿವೆ. ದೇಶದ ಶೇ.೩೬ ಜನರು ವಾಸಿಸುವ ನಗರಗಳು ಬೃಹತ್ ಪ್ರಮಾಣದಲ್ಲಿ ಕಲುಷಿತ ನೀರನ್ನು ಉತ್ಪಾದಿಸಿ ವಿಸರ್ಜಿಸುತ್ತಿವೆ. ಅವಶ್ಯಕ ಮೂಲಸೌಕರ್ಯಗಳ ಕೊರತೆಯಿಂದಾಗಿ ನಗರಗಳು ಕೇವಲ ಶೇ.೩೧ ರಷ್ಟು ಕಲುಷಿತ ನೀರನ್ನು ಶುದ್ಧೀಕರಿಸುತ್ತಿವೆ. ಹಾಗೂ ಇನ್ನುಳಿದ ಶೇ. ೬೯ ರಷ್ಟು ಕಲುಷಿತ ನೀರನ್ನು ಯಥಾಸ್ಥಿತಿಯಲ್ಲಿ ಚರಂಡಿಗಳಲ್ಲಿ ವಿಸರ್ಜಿಸುತ್ತವೆ. ಈ ಕಲುಷಿತ ನೀರಿನಿಂದಾಗಿ ದೇಶದ ನಿವಾಸಿಗಳಿಗೆ ಅಯಾಚಿತ ಸಮಸ್ಯೆಗಳು ಬಾಧಿಸುತ್ತಿವೆ. ಇವುಗಳಲ್ಲಿ ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ಅನೇಕ ಅಮಾಯಕರು ಬಲಿಯಾಗುತ್ತಿದ್ದಾರೆ. 

ಪರಿಹಾರವೇನು?

ದೇಶದ ಪ್ರತಿಯೊಂದು ರಾಜ್ಯದ ಪ್ರತಿಯೊಂದು ನಗರ- ಪಟ್ಟಣಗಳಲ್ಲಿನ ಪ್ರತಿಯೊಂದು ಕಟ್ಟಡಗಳಲ್ಲಿ ಮಳೆನೀರು ಕೊಯ್ಲನ್ನು ಕಡ್ಡಾಯವಾಗಿಸಬೇಕು. ಇದರಿಂದಾಗಿ ನಾವಿಂದು ಬಳಸದೆ ಇರುವ ಶೇ. ೬೫ ರಷ್ಟು ಮಳೆನೀರನ್ನು ಬಳಸಿ ಉಳಿಸಬಹುದಾಗಿದೆ. 

ಅದೇ ರೀತಿಯಲ್ಲಿ ಧಾರಾಳ ನೀರು ಲಭ್ಯವಿರುವಲ್ಲಿ ಅನಾವಶ್ಯಕವಾಗಿ ಯಥೇಚ್ಛ ನೀರನ್ನು ಬಳಸಿ ಪೋಲು ಮಾಡುವ ಹವ್ಯಾಸವನ್ನು ತತ್ ಕ್ಷಣದಿಂದಲೇ ನಿಲ್ಲಿಸಬೇಕು. 

ಕಲುಷಿತ ಜಲಮೂಲಗಳಲ್ಲಿನ ನೀರನ್ನು ಶುದ್ಧೀಕರಿಸಲು ಲಭ್ಯವಿರುವ ೧೩೦ ಕ್ಕೂ ಅಧಿಕ ವಿಧದ ಸಸ್ಯಗಳನ್ನು ಮತ್ತು ಸೂಕ್ಷ್ಮಾಣುಜೀವಿಗಳನ್ನು ಬಳಸುವ ಮೂಲಕ, ಈ ನೀರಿನ ಗುಣಮಟ್ಟಗಳನ್ನು ವೃದ್ಧಿಸಬೇಕು. ಜೊತೆಗೆ ಇಂತಹ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಇನ್ನಷ್ಟು ಜನರು ಇವುಗಳನ್ನು ಬಳಸುವಂತಾಗಬೇಕು. 

ಅಂತಿಮವಾಗಿ ಬೃಹತ್ ಉದ್ದಿಮೆಗಳು, ಮಹಾನಗರಗಳು ಮತ್ತು ಅತ್ಯಧಿಕ ಪ್ರಮಾಣದಲ್ಲಿ ಜಲಪ್ರದೂಷಣೆಗೆ ಕಾರಣವೆನಿಸುವ ಮೂಲಗಳೇ, ಈ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುವ ಕಟ್ಟುನಿಟ್ಟಿನ ಕಾನೂನನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಇವೆಲ್ಲವುಗಳೊಂದಿಗೆ ನಾವಿಂದು ಅತಿಯಾಗಿ ಬಳಸಿ ಪೋಲು ಮಾಡುತ್ತಿರುವ ಅಗಾಧ ಪ್ರಮಾಣದ ನೀರನ್ನು ಉಳಿಸಲು ಅವಶ್ಯಕ ಕ್ರಮಗಳನ್ನು ಅನುಸರಿಸಬೇಕು. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 





No comments:

Post a Comment