Thursday, July 3, 2014

Disposable blankets for railway travellers!





 ತ್ಯಾಜ್ಯಗಳ ಉತ್ಪಾದನೆಯನ್ನು ಹೆಚ್ಚಿಸಲಿರುವ ರೈಲ್ವೇ ಇಲಾಖೆ !

ಭವ್ಯ ಭಾರತದ ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು, ತಮ್ಮ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ವೈವಿಧ್ಯಮಯ ತ್ಯಾಜ್ಯಗಳನ್ನು ಸಂಗ್ರಹಿಸಿ, ವೈಜ್ನಾನಿಕ ವಿಧಾನಗಳಿಂದ ವಿಲೇವಾರಿ ಮಾಡಲು ಹೆಣಗಾಡುತ್ತಿವೆ. ಆದರೆ ಸ್ಥಳೀಯ ಜನರ ಅಸಹಕಾರ, ನಿರ್ಲಕ್ಷ್ಯ ಮತ್ತು ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗಳಿಗೆ ಬೇಕಾಗುವ ಅವಶ್ಯಕ ಸಂಖ್ಯೆಯ ವಾಹನಗಳು, ಸಿಬಂದಿ ಮತ್ತು ತ್ಯಾಜ್ಯ ವಿಲೇವಾರಿ ಘಟಕಗಳ ಅಭಾವದಿಂದಾಗಿ ಸೋತುಹೋಗಿವೆ. ಈ ಸಮಸ್ಯೆಯನ್ನು ಸಮರ್ಥವಾಗಿ ಪರಿಹರಿಸಲು ತ್ಯಾಜ್ಯಗಳ ಉತ್ಪಾದನೆಯನ್ನು ತಕ್ಷಣದಿಂದಲೇ ಕಡಿಮೆ ಮಾಡಬೇಕಾದ ಅನಿವಾರ್ಯತೆಯೂ ಇದೆ. ಏಕೆಂದರೆ ತ್ಯಾಜ್ಯಗಳ ಉತ್ಪಾದನೆ ಹೆಚ್ಚಿದಷ್ಟು, ಇವುಗಳ ಸಂಗ್ರಹ ಮತ್ತು ವಿಲೆವಾರಿಗಳು ಇನ್ನಷ್ಟು ಜಟಿಲವಾಗುತ್ತವೆ. ಆದರೆ ಭಾರತೀಯ ರೈಲ್ವೇ ಇಲಾಖೆಯು ಇದಕ್ಕೆ ತದ್ವಿರುದ್ಧವಾಗಿ, ತ್ಯಾಜ್ಯಗಳ ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುವ ಯೋಜನೆಯೊಂದನ್ನು ಸದ್ಯೋಭವಿಷ್ಯದಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ!. 

ಬಳಸಿ ಎಸೆಯುವ ಹಾಸಿಗೆ!

ಇದೇ ತಿಂಗಳಿನ ಮೊದಲ ವಾರದಲ್ಲಿ ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯಂತೆ, ಈಗ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಕರಿಗೆ ನೀಡುತ್ತಿರುವ ಹೊದಿಕೆಗಳು ಶುಚಿಯಾಗಿಲ್ಲ ಎಂದು ವ್ಯಾಪಕವಾದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪಾಲಿಯೆಸ್ಟರ್ ನಿರ್ಮಿತ ಹೊದಿಕೆಗಳನ್ನು ನೀಡಲು ಚಿಂತನೆ ನಡೆದಿದೆ. ಇದೇ ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗಿದ್ದ ವರದಿಯ ತಲೆಬರಹದಲ್ಲಿ " ಹೊದಿಕೆ" ಎನ್ನುವ ಪದವನ್ನು ಬಳಸಲಾಗಿದ್ದರೂ, ವರದಿಯಲ್ಲಿ ಬಳಸಿ ಎಸೆಯುವ ಹಾಸಿಗೆಯನ್ನು ನೀಡಲಾಗುವುದು ಎಂದು ನಮೂದಿಸಲಾಗಿತ್ತು. ದೂರಪ್ರಯಾಣದ ರೈಲುಗಳಲ್ಲಿ ಸ್ಲೀಪರ್ ಕೋಚ್ ಬಳಸುವ ಪ್ರಯಾಣಿಕರಿಗಾಗಿ ನೀಡಲಿರುವ ಬಳಸಿ ಎಸೆಯುವ ಹೊದಿಕೆ ಅಥವಾ ಹಾಸಿಗೆಗಳು, ರೈಲುಗಳಲ್ಲಿ ಉತ್ಪನ್ನವಾಗುವ ತ್ಯಾಜ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಲು ಕಾರಣವೆನಿಸಲಿದೆ. ಜೊತೆಗೆ ಈ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ವ್ಯವಸ್ಥೆಗಾಗಿ, ಇಲಾಖೆಯು ಇನ್ನಷ್ಟು ಹಣವನ್ನು ವ್ಯಯಿಸಬೇಕಾಗುತ್ತದೆ. ಬೆಂಗಳೂರು- ದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಬಳಸಿ ಎಸೆಯುವ ಹೊದಿಕೆಗಳನ್ನು ಪ್ರಾಯೋಗಿಕವಾಗಿ ಒದಗಿಸಲಿರುವ ಇಲಾಖೆಯು, ಮುಂದೆ ಇತರ ರೈಲುಗಳಲ್ಲೂ ಇದನ್ನು ಅನುಷ್ಠಾನಿಸುವ ಸೂಚನೆಯನ್ನು ನೀಡಿದೆ.  ಈ ಬಾರಿಯ ರೈಲ್ವೇ ಬಜೆಟ್ ನಲ್ಲಿ ಈ ಪ್ರಸ್ಥಾವನೆಯು ಘೋಷಣೆಯಾಗಲಿದೆ. 

ಸ್ವಚ್ಚತೆಯ ಕಾಳಜಿ 

ನಿಜ ಹೇಳಬೇಕಿದ್ದಲ್ಲಿ ಪ್ರಯಾಣಿಕರಿಗೆ ಒದಗಿಸುತ್ತಿರುವ ಹೊದಿಕೆಗಳು ಸ್ವಚ್ಚವಾಗಿಲ್ಲ ಎನ್ನುವ ದೂರುಗಳ ಆಧಾರದ ಮೇಲೆ ಇಂತಹ  ಕ್ರಮ ಕೈಗೊಳ್ಳಲು ನಿರ್ಧರಿಸಿರುವ ಇಲಾಖೆಯು, ಅಧಿಕತಮ ರೈಲು ಬೋಗಿಗಳಲ್ಲಿ ಸದಾ ತುಂಬಿರುವ ಕಸ ಮತ್ತಿತರ ತ್ಯಾಜ್ಯಗಳು,ಆಗಾಗ  ಸ್ವಚ್ಛಗೊಳಿಸದ ಕಾರಣದಿಂದಾಗಿ ಹೊಲಸಾಗಿ ದುರ್ವಾಸನೆಯನ್ನು ಬೀರುವ ಶೌಚಾಲಯಗಳು ಮತ್ತು ರೈಲು ಬೋಗಿಗಳಲ್ಲಿರುವ ಪುಟ್ಟ ಕಸದ ಡಬ್ಬಿಗಳನ್ನು ತೆರವು- ಸ್ವಚ್ಚಗೊಳಿಸುವ ವಿಚಾರದ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇರಲು ಕಾರಣವೇನೆಂದು ನಮಗೂ ತಿಳಿದಿಲ್ಲ. ಇಲಾಖೆ ನಿಗದಿಸಿದ ಪ್ರಯಾಣ ದರವನ್ನು ಪಾವತಿಸಿ ಪಯಣಿಸುವ ಜನರ ಪ್ರತಿಯೊಂದು ದೂರನ್ನು ಪರಿಹರಿಸಬೇಕಾದ ಹೊಣೆಗಾರಿಕೆ ಇಲಾಖೆಯ ಅಧಿಕಾರಿಗಳ ಮೇಲಿದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಲೀಪರ್ ಕೋಚ್ ಗಳಲ್ಲಿ ಪಯಣಿಸುವ ಪ್ರಯಾಣಿಕರ ದೂರುಗಳನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ, ಇದನ್ನು ಪರಿಹರಿಸುವ ಸಲುವಾಗಿ ಇನ್ನಷ್ಟು ತ್ಯಾಜ್ಯಗಳನ್ನು ಉತ್ಪಾದಿಸುವುದು ನಿಜಕ್ಕೂ ಸಮರ್ಥನೀಯವಲ್ಲ.ಈಗಾಗಲೇ ದೂರ ಪ್ರಯಾಣ ಮಾಡುವ ರೈಲು ಪ್ರಯಾಣಿಕರು ತಮ್ಮೊಂದಿಗೆ ಕೊಂಡೊಯ್ಯುವ ಖಾದ್ಯಪೇಯಗಳನ್ನು ಆಸ್ವಾದಿಸಿದ ಬಳಿಕ, ಬಳಸಿ ಎಸೆಯುವ ಪ್ಲಾಸ್ಟಿಕ್ ತಟ್ಟೆ,ಲೋಟ, ಚಮಚ, ಕೈಚೀಲ ಮತ್ತು ಬಾಟಲಿ ಮತ್ತಿತರ ತ್ಯಾಜ್ಯಗಳಿಂದಾಗಿ ರೈಲು ಹಳಿಗಳ ಇಕ್ಕೆಲಗಳಲ್ಲೂ ಇವುಗಳ ರಾಶಿಗಳು ರಾರಾಜಿಸುತ್ತಿವೆ. ರೈಲು ಬೋಗಿಗಳಲ್ಲಿನ ತ್ಯಾಜ್ಯಗಳನ್ನೇ ತೆರವುಗೊಳಿಸದ ಇಲಾಖೆಯು, ಹಳಿಗಳ ಇಕ್ಕೆಲಗಳಲ್ಲಿ ಎಸೆದಿರುವ ತ್ಯಾಜ್ಯಗಳನ್ನು ತೆರವುಗೊಳಿಸುವ ಸಾಧ್ಯತೆಗಳೇ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವೆನಿಸುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಕಡಿಮೆ ಮಾಡುವ ಹೊರತಾಗಿ, ಇದೀಗ ರೈಲ್ವೇ ಇಲಾಖೆಯು ಸ್ಲೀಪರ್ ಕೋಚ್ ಬಳಸುವ ಪ್ರಯಾಣಿಕರಿಗೆ ಬಳಸಿ ಎಸೆಯುವ ಹಾಸಿಗೆ ಅಥವಾ ಹೊದಿಕೆಗಳನ್ನು ನೀಡಲಿರುವುದು ಎಷ್ಟು ಸಮಂಜಸ ಎನ್ನುವ ನಿರ್ಧಾರವನ್ನು  ಪರಾಮರ್ಶೆ ಮಾಡಬೇಕಾಗಿದೆ. ನಮ್ಮ ರಾಜ್ಯದವರೇ ಆಗಿರುವ ರೈಲ್ವೇ ಸಚಿವರು ಇಂತಹ ಯೋಜನೆಗಳ ಸಾಧಕ- ಬಾಧಕಗಳನ್ನು ಅರಿತುಕೊಳ್ಳದೇ ಅನುಷ್ಠಾನಿಸುವುದು ನಿಶ್ಚಿತವಾಗಿಯೂ ಹಿತಕರವಲ್ಲ ಎನ್ನುವುದು ನಮ್ಮ ಅನಿಸಿಕೆ. 

ಕೊನೆಯ ಮಾತು 

ನಮ್ಮ ದೇಶದ ಉದ್ದಗಲಕ್ಕೂ ದಿನನಿತ್ಯ ನೂರಾರು ದೂರ ಪ್ರಯಾಣದ ರೈಲುಗಳು ಸಂಚರಿಸುತ್ತಿದ್ದು, ಸಹಸ್ರಾರು ಪ್ರಯಾಣಿಕರು ಸ್ಲೀಪರ್ ಕೋಚ್ ಬಳಸುತ್ತಿದ್ದಾರೆ. ಇವರೆಲ್ಲರೂ ಬಳಸಿ ಎಸೆಯುವ ಹೊದಿಕೆಗಳನ್ನು ( ರಾಶಿಯನ್ನು) ಸಂಗ್ರಹಿಸಿ, ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಾಗಿಸಿ ವಿಲೇವಾರಿ ಮಾಡುವ ವ್ಯವಸ್ಥೆಯು ರೈಲ್ವೇ ಇಲಾಖೆಯ ಬಳಿ ಇಲ್ಲವೆನ್ನುವುದು ಸಚಿವರಿಗೂ ತಿಳಿದಿರಲೇಬೇಕು. ಆದುದರಿಂದ ಇನ್ನಷ್ಟು ಸಮಸ್ಯೆಗಳಿಗೆ ಕಾರಣವೆನಿಸಬಲ್ಲ ಈ ನಿರ್ಧಾರವನ್ನು ರದ್ದುಪಡಿಸಿ, ರೈಲು ಬೋಗಿಗಳ ಮತ್ತು ಅವುಗಳಲ್ಲಿನ ಶೌಚಾಲಯಗಳ ಸ್ವಚ್ಚತೆಯತ್ತ ಗಮನಹರಿಸುವುದು ಉಪಯುಕ್ತವೆನಿಸೀತು!. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 


No comments:

Post a Comment