Thursday, July 10, 2014

JUNK FOOD- BAN THE PLASTIC PACKAGING





 ಜಂಕ್ ಫುಡ್ : ಪ್ಲಾಸ್ಟಿಕ್ ಕವಚಗಳನ್ನು ನಿಷೇಧಿಸಿ !

ನಮ್ಮ ದೇಶದ ಯುವಜನರು ಮತ್ತು ಪುಟ್ಟ ಮಕ್ಕಳು ಮೆಚ್ಚಿ ಸವಿಯುವ ನಿರುಪಯುಕ್ತ ಖಾದ್ಯ (ಜಂಕ್ ಫುಡ್ ) ಗಳನ್ನು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತುಂಬಿಸಿ ಮಾರಾಟ ಮಾಡುವುದನ್ನು ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯವು ಗತವರ್ಷದಲ್ಲೇ ನಿಷೇಧಿಸಿತ್ತು. ಜೊತೆಗೆ ಇಂತಹ ಅನಾರೋಗ್ಯಕರ ಖಾದ್ಯಗಳನ್ನು ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಹಾಗೂ ನಿರಪಾಯಕರ ಕವಚಗಳಲ್ಲೇ ತುಂಬಿಸಿ ಮಾರಾಟ ಮಾಡುವಂತೆ ಆದೇಶಿಸಿತ್ತು. ನ್ಯಾಯಾಲಯದ ಈ ಆದೇಶವನ್ನು ಅಲ್ಲಿನ ಸರ್ಕಾರವು ಕಳೆದ ವರ್ಷದ ಎಪ್ರಿಲ್ ೧ ರಿಂದಲೇ ಅನುಷ್ಠಾನಗೊಳಿಸಿದೆ. 

ನಿಷೇಧಕ್ಕೆ ಮನವಿ 

ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠಕ್ಕೆ ೨೦೧೦ರಲ್ಲಿ ಸಲ್ಲಿಸಿದ್ದ ಮೂರು ಮನವಿಗಳ ವಿಚಾರಣೆಯನ್ನು ನಡೆಸಿದ್ದ ನ್ಯಾಯಾಲಯವು  ಗತವರ್ಷದ ಜನವರಿ ೧೦ ರಂದು ಪ್ರಕಟಿಸಿದ್ದ ತೀರ್ಪಿನಲ್ಲಿ, ಪ್ಲಾಸ್ಟಿಕ್ ಕವಚಗಳಲ್ಲಿ ತುಂಬಿಸಿ ಮಾರುತ್ತಿರುವ  ನಿರುಪಯುಕ್ತ ಖಾದ್ಯಪೇಯಗಳನ್ನೇ ನಿಷೇಧಿಸುವ ವಿಚಾರವು ತನ್ನ ಮುಂದೆ ಇಲ್ಲದಿರುವುದರಿಂದ ಈ ಬಗ್ಗೆ ಎನೆನ್ನೂ ಹೇಳಬಯಸುವುದಿಲ್ಲ. ಆದರೆ ಹಿಮಾಚಲ ಪ್ರದೇಶ್ ನಾನ್ ಬಯೋ ಡಿಗ್ರೆಡೆಬಲ್( ಕಂಟ್ರೋಲ್) ಏಕ್ಟ್ ೧೯೯೫ ರನ್ವಯ, ಇಂತಹ ಅಪಾಯಕಾರಿ ಹಾಗೂ ಅನಾರೋಗ್ಯಕರ ಉತ್ಪನ್ನಗಳನ್ನು ಮಣ್ಣಿನಲ್ಲಿ ಸುಲಭವಾಗಿ ಕರಗಿ ಬೆರೆಯಬಲ್ಲ ಕವಚಗಳಲ್ಲೇ ತುಂಬಿ ಮಾರಾಟ ಮಾಡಬೇಕು ಎಂದು ಆದೇಶಿಸಿತ್ತು. ಈ ರೀತಿಯ ಕವಚಗಳ ಬಳಕೆಯಿಂದ ಇಂತಹ ಉತ್ಪನ್ನಗಳ ಬೆಲೆ ಹೆಚ್ಚುವುದಾದರೂ, ಮಕ್ಕಳ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಇದು ಸಮರ್ಥನೀಯವೂ ಹೌದು ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು. 

ಸಮಿತಿಯ ರಚನೆ 

ಮನುಷ್ಯನ ಆರೋಗ್ಯಕ್ಕೆ ಮಾರಕವೆನಿಸಬಲ್ಲ ಪ್ಲಾಸ್ಟಿಕ್ ನ ಅತಿಬಳಕೆಯನ್ನು ನಿಯಂತ್ರಿಸುವಂತೆ ೨೦೧೦ರಲ್ಲಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ, ಉಚ್ಚ ನ್ಯಾಯಾಲಯವು ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯು ಖಾದ್ಯ ಉತ್ಪನ್ನಗಳ ಪ್ಯಾಕೇಜಿಂಗ್ ನಲ್ಲಿ ಪ್ಲಾಸ್ಟಿಕ್ ನ ಅನುಚಿತ ಮತ್ತು ಅತಿಯಾದ ಬಳಕೆಯನ್ನು ಕಡಿಮೆಮಾಡಬಲ್ಲ ವಿಧಾನಗಳು ಮತ್ತು ತತ್ಸಂಬಂಧಿತ ಅನ್ಯ ಸಲಹೆ ಸೂಚನೆಗಳನ್ನು ಶಿಫಾರಸು ಮಾಡುವಂತೆ ಆದೇಶಿಸಿತ್ತು. ಆದರೆ ಈ ಸಮಿತಿಯು ನ್ಯಾಯಾಲಯದ ಆದೇಶವನ್ನು ಪಾಲಿಸಲು ವಿಫಲವಾಗಿತ್ತು. ತದನಂತರ ನೇಮಕಗೊಂಡಿದ್ದ ಮತ್ತೊಂದು ಸಮಿತಿಯು ಸುದೀರ್ಘಕಾಲ ಮೀನಮೇಷ ಎಣಿಸಿದ ಬಳಿಕ, ಗತವರ್ಷದ ಆದಿಯಲ್ಲಿ ತನ್ನ ಶಿಫಾರಸುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. 

ಸಮಿತಿಯ ಶಿಫಾರಸುಗಳ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡಿದ್ದು, ಬಯೋ ಡಿಗ್ರೆಡೆಬಲ್ ಕವಚಗಳು ದುಬಾರಿ ಎನಿಸುವುದರೊಂದಿಗೆ ಇವುಗಳಲ್ಲಿ ತುಂಬಿದ ಖಾದ್ಯಗಳು ಸುದೀರ್ಘಕಾಲ ತಮ್ಮ ತಾಜಾತನವನ್ನು ಉಳಿಸಿಕೊಳ್ಳುವ ಸಾಧ್ಯತೆಗಳಿಲ್ಲ. ಇದರಿಂದಾಗಿ ತಯಾರಕರಿಗೆ ಸಾಕಷ್ಟು ಕಷ್ಟ ನಷ್ಟಗಳು ಸಂಭವಿಸಲಿದೆ ಎಂದು ವಾದಿಸಲಾಗಿತ್ತು. ಆದರೆ ಜನಸಾಮಾನ್ಯರ ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯ ಮತ್ತು ಪರಿಸರದ ಮೇಲೆ ಬಳಸಿ ಎಸೆದ ಪ್ಲಾಸ್ಟಿಕ್ ಕವಚಗಳು ಬೀರುವ ದುಷ್ಪರಿಣಾಮಗಳನ್ನು ಪರಿಗಣಿಸಿದಲ್ಲಿ, ಇವುಗಳನ್ನು ನಿಷೇಧಿಸುವುದು ಅನಿವಾರ್ಯ ಎನಿಸಲಿದೆ ಎಂದು ನ್ಯಾಯಾಲಯ ಹೇಳಿತ್ತು. 

ಸಮಿತಿಯ ಅಭಿಪ್ರಾಯ 

ನ್ಯಾಯಾಲಯ ನೇಮಿಸಿದ್ದ ಸಮಿತಿಯ ಅಭಿಪ್ರಾಯದಂತೆ ನಿರುಪಯುಕ್ತ ಆಹಾರವೆಂದು ಗುರುತಿಸಲ್ಪಟ್ಟಿರುವ ಆಲೂಗೆಡ್ಡೆಯ ಚಿಪ್ಸ್ ಮತ್ತಿತರ ಕುರುಕಲು ತಿಂಡಿಗಳು, ಬಿಸ್ಕೆಟ್, ಚಾಕೊಲೆಟ್, ಕ್ಯಾಂಡಿ, ವೇಫರ್ಸ್, ಚ್ಯೂಯಿಂಗ್ ಗಮ್, ನೂಡಲ್ಸ್, ಕಾರ್ನ್ ಫ್ಲೇಕ್ಸ್, ಪಿಜ್ಜಾ, ಬರ್ಗರ್, ಕೇಕ್, ಲಘು ಪಾನೀಯಗಳು ಮತ್ತು ಸಿದ್ಧ ಹಣ್ಣಿನ ರಸ ಮುಂತಾದವುಗಳ ಅತಿಸೇವನೆಯಿಂದ ಅಧಿಕತೂಕ, ಅತಿಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಕರುಳಿನ ಕ್ಯಾನ್ಸರ್ ಮತ್ತಿತರ ಅನೇಕ ಗಂಭೀರ- ಮಾರಕ ವ್ಯಾಧಿಗಳು ಉದ್ಭವಿಸುವ ಸಾಧ್ಯತೆಗಳಿವೆ. ಜಂಕ್ ಫುಡ್ ಗಳನ್ನೂ ಪ್ಲಾಸ್ಟಿಕ್ ಕವಚಗಳಲ್ಲಿ ತುಂಬಿಸಿ ಮಾರಾಟ ಮಾಡುವುದರಿಂದ ಇನ್ನಷ್ಟು ಕಾಯಿಲೆಗಳು ಬಂದೆರಗುವ ಸಾಧ್ಯತೆಗಳಿವೆ. ಆದುದರಿಂದ ಇಂತಹ ಉತ್ಪನ್ನಗಳನ್ನು ಮಣ್ಣಿನಲ್ಲಿ ಕರಗಿ ಬೇರೆಯಬಲ್ಲ ಬಯೋ ಡಿಗ್ರೆಡೆಬಲ್  ಕವಚಗಳಲ್ಲೇ ತುಂಬಿಸಿ ಮಾರಾಟ ಮಾಡುವಂತೆ ಸಮಿತಿಯು ಸಮಿತಿಯು ಶಿಫಾರಸು ಮಾಡಿತ್ತು. 

ಅಂತಿಮವಾಗಿ ಹೇಳುವುದಾದಲ್ಲಿ ಖಾದ್ಯ ಅಥವಾ ಇನ್ನಿತರ ಯಾವುದೇ ಉತ್ಪನ್ನಗಳ ಪ್ಯಾಕೇಜಿಂಗ್ ನಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ಪ್ಲಾಸ್ಟಿಕ್ ಕವಚಗಳು, ದೇಶದ ಪ್ರತಿಯೊಂದು ನಗರ-ಪಟ್ಟಣಗಳಲ್ಲಿ ಪ್ರತಿನಿತ್ಯ ಉತ್ಪನ್ನವಾಗುತ್ತಿರುವ ತ್ಯಾಜ್ಯಗಳ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ತತ್ಪರಿಣಾಮವಾಗಿ ಜನಸಾಮಾನ್ಯರ ಆರೋಗ್ಯ ಮತ್ತು ಪರಿಸರಗಳ ಮೇಲೆ ತೀವ್ರ ಸ್ವರೂಪದ ದುಷ್ಪರಿಣಾಮಗಳನ್ನು ಬೀರುತ್ತಿದೆ. ಇದೇ ಕಾರಣದಿಂದಾಗಿ ದೇಶದ ಪ್ರತಿಯೊಂದು ರಾಜ್ಯಗಳೂ ಹಿಮಾಚಲ ಪ್ರದೇಶದ ಉಚ್ಚ ನ್ಯಾಯಾಲಯದ ಆದೇಶವನ್ನು ಅನುಕರಿಸಬೇಕಿದೆ.

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 


No comments:

Post a Comment