Friday, July 4, 2014

NON COMMUNICABLE DISEASES






 

 ಪರಸ್ಪರ  ಹರಡದ ಗಂಭೀರ ಕಾಯಿಲೆಗಳು 

ನಮ್ಮನ್ನು ಪೀಡಿಸುವ ಸಹಸ್ರಾರು ಕಾಯಿಲೆಗಳಲ್ಲಿ ಕಾಯಿಲೆಗಳಲ್ಲಿ, ಪರಸ್ಪರ ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಹಲವಾರು ಕಾಯಿಲೆಗಳೂ ಸೇರಿವೆ. ಆದರೆ ಅನೇಕ ವಿದ್ಯಾವಂತರೂ ನಂಬಿರುವಂತೆ ಸಾಂಕ್ರಾಮಿಕವಾಗಿ ಹರಡಬಲ್ಲ ಅನೇಕ ಕಾಯಿಲೆಗಳಂತೆಯೇ, ಪರಸ್ಪರ ಹರಡದ ಕಾಯಿಲೆಗಳೂ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಜಾಗತಿಕ ಮಟ್ಟದಲ್ಲಿ ಇಂತಹ ಕಾಯಿಲೆಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆಯು ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. 

ಮನುಷ್ಯನನ್ನು ಬಾಧಿಸುವ ವೈವಿಧ್ಯಮಯ ವ್ಯಾಧಿಗಳಿಗೆ ಅನೇಕ ಕಾರಣಗಳಿವೆ. ಇವುಗಳಲ್ಲಿ ಅನುವಂಶಿಕತೆ, ಜನ್ಮದತ್ತ ಕಾಯಿಲೆಗಳು, ಸೂಕ್ಷ್ಮಾಣು ಜೀವಿಗಳ ಸೋಂಕು,ನಾವು ಸೇವಿಸುವ ನೀರು,ಗಾಳಿ ಹಾಗೂ ಆಹಾರ, ಮಾನಸಿಕ ಒತ್ತಡ, ಪ್ರದೂಷಿತ ಪರಿಸರ ಮತ್ತು ದುಶ್ಚಟಗಳು ಪ್ರಮುಖವಾಗಿವೆ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ " ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಕಾಯಿಲೆ" ಗಳ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಅರ್ಥಾತ್, ಭಾರತೀಯರು ಅನುಸರಿಸುತ್ತಿರುವ ಪಾಶ್ಚಾತ್ಯ ಹಾಗೂ ಅಧುನಿಕ ಜೀವನಶೈಲಿಗಳ ಪರಿಣಾಮವಾಗಿ, ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಗಂಭೀರ ಮತ್ತು ಮಾರಕ ಕಾಯಿಲೆಗಳ ಪ್ರಮಾಣ ಅನಿಯಂತ್ರಿತವಾಗಿ ವೃದ್ಧಿಸುತ್ತಿದೆ.  ಜೊತೆಗೆ ಕೆಲ ದಶಕಗಳ ಹಿಂದೆ ಮಧ್ಯ ವಯಸ್ಸು ಮೀರಿದ ಬಳಿಕ ಪ್ರತ್ಯಕ್ಷವಾಗುತ್ತಿದ್ದ ಇಂತಹ ಕಾಯಿಲೆಗಳು, ಇದೀಗ ಎಳೆಯ ವಯಸ್ಸಿನ ಮಕ್ಕಳು ಮತ್ತು ಯುವಜನರನ್ನು ಕಾಡಲಾರಂಭಿಸಿವೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿರುವ ಈ ಸಮಸ್ಯೆಯನ್ನು ಕೇವಲ ಔಷದ ಸೇವನೆಯ ಮೂಲಕ ಗುಣಪಡಿಸಲು ಅಸಾಧ್ಯವೆನಿಸುತ್ತಿದೆ. 

ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯದಂತೆ ಆಸ್ತಮಾ,ವಿವಿಧ ರೀತಿಯ ಕ್ಯಾನ್ಸರ್, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ದೀರ್ಘಕಾಲೀನ ಶ್ವಾಸಾಂಗಗಳ ಅಡಚಣೆಯ ಕಾಯಿಲೆ, ಜನ್ಮದತ್ತ ಆರೋಗ್ಯದ ಸಮಸ್ಯೆಗಳು, ಮಧುಮೇಹ, ಜೀರ್ಣಾಂಗಗಳ ಕಾಯಿಲೆಗಳು ( ಜಠರದ ಹುಣ್ಣು ಇತ್ಯಾದಿ), ಮಾತ್ರ- ಪ್ರಜನನಾಂಗಗಳ ವ್ಯಾಧಿಗಳು(ಉದಾ- ಪ್ರಾಸ್ಟೇಟ್ ಮತ್ತು ಮೂತ್ರಪಿಂಡಗಳ ಕಾಯಿಲೆಗಳು), ನಾರಾ ಮಾನಸಿಕ ಸಮಸ್ಯೆಗಳು ( ಉದಾ-ಮಾನಸಿಕವ್ಯಾಧಿಗಳು, ಅಪಸ್ಮಾರ, ಅಲ್ಜೀಮರ್ಸ್ ಇತ್ಯಾದಿ), ಚರ್ಮರೋಗಗಳು, ಮಾಂಸಪೇಶಿ- ಎಲುಬುಗಳ ಕಾಯಿಲೆಗಳು (ಉದಾ-ಆರ್ಥ್ರೈಟಿಸ್ ), ಕಣ್ಣಿಗೆ ಸಂಬಂಧಿಸಿದ ವ್ಯಾಧಿಗಳು ( ಉದಾ-ಗ್ಲಕೋಮ) ಸಾಂಕ್ರಾಮಿಕವಾಗಿ ಹರಡದ ಕಾಯಿಲೆಗಳ ಪಟ್ಟಿಯಲ್ಲಿ ಸೇರಿವೆ. 

ಸಮಸ್ಯೆಗೆ ಕಾರಣವೇನು?

ಪಾಶ್ಚಾತ್ಯರ ಜೀವನಶೈಲಿಯಿಂದ ಪ್ರಭಾವಿತರಾಗಿರುವ ಗಣನೀಯ ಪ್ರಮಾಣದ ಭಾರತೀಯರು, ಸುಖಲೋಲುಪತೆಗೆ ಶರಣಾಗಿರುವುದು ಆರೋಗ್ಯದ ದೃಷ್ಟಿಯಿಂದ ಹಿತಕರವಲ್ಲ ಎನ್ನುವುದರಲ್ಲಿ ಸಂದೇಹವಿಲ್ಲ. ಆರಾಮದಾಯಕ ಜೀವನಕ್ಕಾಗಿ ನಾವಿಂದು ಆವಿಷ್ಕರಿಸಿರುವ ಅನೇಕ ಸೌಕರ್ಯಗಳು ಮತ್ತು ಯಂತ್ರಗಳಿಂದಾಗಿ, ನಮ್ಮ ಶಾರೀರಿಕ ಕ್ಷಮತೆಯ ಮಟ್ಟದೊಂದಿಗೆ, ರೋಗನಿರೋಧಕ ಶಕ್ತಿಯೂ ಪಾತಾಳಕ್ಕೆ ಕುಸಿದಿದೆ. ತತ್ ಪರಿಣಾಮವಾಗಿ ಈ ವರ್ಗಕ್ಕೆ ಸೇರಿದ ಅನೇಕ ಕಾಯಿಲೆಗಳು ಅಧಿಕತಮ ಜನರನ್ನು ಬಾಧಿಸುತ್ತಿವೆ. ಇದರೊಂದಿಗೆ ಇಂತಹ ಕೆಲವು ಕಾಯಿಲೆಗಳು ಅನುವಂಶಿಕವಾಗಿ ಮುಂದಿನ ಪೀಳಿಗೆಯಲ್ಲಿ ಕಾಣಿಸಿಕೊಂಡಲ್ಲಿ, ಮತ್ತೆ ಕೆಲವು ಕಾಯಿಲೆಗಳು ನಮ್ಮ ಸುತ್ತಮುತ್ತಲ ಪರಿಸರ, ನಾವು ಸೇವಿಸುವ ಕಲುಷಿತ ಗಾಳಿ ಹಾಗೂ ನೀರು ಮತ್ತು ಕೀಟನಾಶಕಗಳಿಂದ ಸಮೃದ್ಧವಾಗಿರುವ ಆಹಾರ, ಪೋಷಕಾಂಶಗಳೇ ಇಲ್ಲದ ನಿರುಪಯುಕ್ತ ಆಹಾರ (ಜಂಕ್ ಫುಡ್) ಗಳ ಸೇವನೆ, ಆರಾಮದಾಯಕ ಹಾಗೂ ನಿಷ್ಕ್ರಿಯ ಜೀವನ ಶೈಲಿ, ಅತಿಯಾದ ಧೂಮಪಾನ-ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಸೇವನೆ, ತೀವ್ರ ಮಾನಸಿಕ ಒತ್ತಡವೇ ಮುಂತಾದ ಕಾರಣಗಳಿಂದ ಸಾಂಕ್ರಾಮಿಕವಾಗಿ ಹರಡದ ವ್ಯಾಧಿಗಳು ಉದ್ಭವಿಸುವ ಸಾಧ್ಯತೆಗಳಿವೆ. 

ಅಪಾಯಕಾರಿ ಅಂಶಗಳು 

ಶಾರೀರಿಕ ನಿಷ್ಕ್ರಿಯತೆ, ತಂಬಾಕಿನ ಬಳಕೆ, ಅಧಿಕ ತೂಕ- ಅತಿ ಬೊಜ್ಜು, ಅಧಿಕ ರಕ್ತದ ಒತ್ತಡ, ರಕ್ತದಲ್ಲಿ ಕೊಲೆಸ್ಟರಾಲ್ ಮತ್ತು ಸಕ್ಕರೆಯ (ಗ್ಲುಕೋಸ್) ಅಂಶಗಳು ಅಧಿಕವಾಗಿರುವುದು, ಇಂತಹ ವ್ಯಾಧಿಪೀಡಿತರ ಮರಣಕ್ಕೆ ಕಾರಣವೆನಿಸುವ ಅಪಾಯಕಾರಿ ಅಂಶಗಳಾಗಿವೆ. ಸಾಂಕ್ರಾಮಿಕವಾಗಿ ಹರಡದ ಕಾಯಿಲೆಗಳ ಮಾರಕತೆಯ ಅಂಕಿ ಅಂಶಗಳು ಈ ಕೆಳಗಿನಂತಿವೆ.  

ಜಾಗತಿಕ ಮಟ್ಟದಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡದ ಕಾಯಿಲೆಗಳಿಗೆ ಶೇ.೬೩ ರಷ್ಟು ಮಂದಿ ಈಡಾಗುತ್ತಿದ್ದಾರೆ. ಅಂತೆಯೇ ವರ್ಷದಲ್ಲಿ ೩೬ ದಶಲಕ್ಷ ಜನರು ಇಂತಹ ವ್ಯಾಧಿಗಳಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೂ ಮಿಗಿಲಾಗಿ ಸುಮಾರು ೯ ದಶಲಕ್ಷ ಜನರು ೬೦ ವರ್ಷ ವಯಸ್ಸಿಗೆ ಮುನ್ನವೇ ಅಕಾಲಿಕ ಮರಣಕ್ಕೆ ಈಡಾಗುತ್ತಿದ್ದಾರೆ. 

ಈ ಸಮಸ್ಯೆಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಜೆಗಳೇ ಹೆಚ್ಚಾಗಿ ಈಡಾಗುತ್ತಿದ್ದು, ೬೦ ವರ್ಷ ವಯಸ್ಸಿಗೆ ಮುನ್ನವೇ ಮೃತಪಡುತ್ತಿರುವ  ಜನರು ಮಧ್ಯಮ ಮತ್ತು ಅಲ್ಪ ಆದಾಯದ ದೇಶಗಳ ಪ್ರಜೆಗಳೇ ಆಗಿದ್ದಾರೆ. ಈ ಗಂಭೀರ ಸಮಸ್ಯೆಯನ್ನು ತಡೆಗಟ್ಟದೇ ಇದ್ದಲ್ಲಿ, ೨೦೩೦ ನೆ ಇಸವಿಯಲ್ಲಿ ೫೩ ದಶಲಕ್ಷ ಜನರು ಇದಕ್ಕೆ ಬಲಿಯಾಗಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಿಸಿದೆ. ಇಷ್ಟು ಮಾತ್ರವಲ್ಲ, ಇದರಿಂದಾಗಿ ದೇಶದ ಪ್ರಜೆಗಳು ಮಾತ್ರವಲ್ಲ. ದೇಶದ ಆರ್ಥಿಕತೆಯ ಮೇಲೂ ಇದು ಪರಿಣಾಮ ಬೀರಲಿದೆ. ೨೦೦೫ ರಿಂದ  ೨೦೧೫ ರ ಅವಧಿಯಲ್ಲಿ ಹೆಚ್ಚಲಿರುವ ಈ ಸಮಸ್ಯೆಯಿಂದಾಗಿ,ನಮ್ಮ ದೇಶದ ಬೊಕ್ಕಸಕ್ಕೆ ೨೩೬ ಬಿಲಿಯನ್ ಡಾಲರ್ ನಷ್ಟು ನಷ್ಟಕ್ಕೆ ಕಾರಣವೆನಿಸಲಿದೆ ಎಂದು ವಿಶ್ವ ಆರೋಗ್ಯಸಂಸ್ಥೆ ಹೇಳಿದೆ. 

ಪರಿಹಾರವೇನು?

ಸಾಮಾನ್ಯವಾಗಿ ನಮ್ಮನ್ನು ಪೀಡಿಸುವ ಇತರ ಕಾಯಿಲೆಗಳ ಚಿಕಿತ್ಸೆಗಿಂತ ಸಾಂಕ್ರಾಮಿಕವಾಗಿ ಹರಡದ ಹಾಗೂ ಸುದೀರ್ಘಕಾಲ ಬಾಧಿಸುವ ವ್ಯಾಧಿಗಳ ಚಿಕಿತ್ಸಾ ವೆಚ್ಚವು ಸಾಕಷ್ಟು ಅಧಿಕವಾಗಿರುತ್ತದೆ. ಸರಕಾರವು ಈ ಸಮಸ್ಯೆಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದಲ್ಲಿ, ಈ ವ್ಯಾಧಿಗಳು ಮತ್ತು ತತ್ಸಂಬಂಧಿತ ಮರಣದ ಪ್ರಮಾಣಗಳು ಇನ್ನಷ್ಟು ಹೆಚ್ಚಲಿವೆ. ಕೇಂದ್ರ ಸರಕಾರವು ಇದೇ ಉದ್ದೇಶದಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಮಧುಮೇಹ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ಪಕ್ಷವಾತ ಹಾಗೂ ಕ್ಯಾನ್ಸರ್ ವ್ಯಾಧಿಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮಗಳನ್ನು ಅನುಷ್ಠಾನಿಸಿದೆ. ಆದರೂ ಸಮಗ್ರ ಕಾರ್ಯಕ್ರಮವನ್ನು ಹದ್ದಿನ ಕಣ್ಣಿನಿಂದ ವೀಕ್ಷಿಸಿ, ಅವಶ್ಯಕ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವೆನಿಸುತ್ತದೆ. ಜೊತೆಗೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯೂ ಇದೆ. ಜೊತೆಗೆ ಇಂತಹ ವ್ಯಾಧಿಗಳನ್ನು ತ್ವರಿತಗತಿಯಲ್ಲಿ ಪತ್ತೆಹಚ್ಚಿ, ಸೂಕ್ತ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಜನಸಾಮಾನ್ಯರಿಗೆ ಈ ಸಮಸ್ಯೆಯ ಬಗ್ಗೆ ವಿಶದವಾದ ಮಾಹಿತಿಗಳನ್ನು ನೀಡುವ ಮೂಲಕ ಇದನ್ನು ಸಮರ್ಪಕವಾಗಿ ನಿಯಂತ್ರಿಸಬಹುದಾಗಿದೆ. 

ದೇಶದ ಪ್ರಜೆಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಮತ್ತು ದೇಶದ ಬೊಕ್ಕಸಕ್ಕೆ ಕನ್ನವನ್ನು ಕೊರೆಯಬಲ್ಲ ಈ ಗಂಭೀರ ಹಾಗೂ ಮಾರಕ ಸಮಸ್ಯೆಯನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ವಿಚಾರದಲ್ಲಿ ಜನಸಾಮಾನ್ಯರು ಸರಕಾರದೊಂದಿಗೆ ಕೈಜೋಡಿಸಬೇಕಾಗಿದೆ. 

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು 




No comments:

Post a Comment