Saturday, July 5, 2014

ILLEGAL MOBILE TOWERS MUST BE SHIFTED





 ಕಾನೂನುಬಾಹಿರ ಮೊಬೈಲ್ ಟವರ್ ಗಳನ್ನು ಸ್ಥಳಾಂತರಿಸಿ 

ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಕಾನೂನುಬಾಹಿರವಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸಿರುವ ಸಂಸ್ಥೆಗಳ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ, ರಾಜ್ಯದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಆರೋಗ್ಯಕ್ಕೆ ಹಾನಿಕರ ಎಣಿಸುತ್ತಿರುವ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅವಶ್ಯಕತೆ ಇದ್ದಲ್ಲಿ ಕರ್ನಾಟಕ ಪೌರಸಂಸ್ಥೆ ಮತ್ತು ಪಂಚಾಯತಿ ಕಾಯಿದೆಗಳಿಗೆ ತಿದ್ದುಪಡಿ ಮಾಡುವ ಅಥವಾ ನೂತನ ಕಾಯಿದೆಗಳನ್ನು ರೂಪಿಸುವಂತೆ ನ್ಯಾಯಾಲಯವು ಜುಲೈ ೪ ರಂದು ಆದೇಶಿಸಿದೆ.

೨೦೧೦ ರ ತೀರ್ಪು 

ರಾಜ್ಯದ ಪ್ರತಿಯೊಂದು ನಗರ- ಪಟ್ಟಣಗಳಲ್ಲಿ ವ್ಯಾಪಕವಾಗಿ ಕಂಡುಬರುವ ಮೊಬೈಲ್ ಗೋಪುರಗಳ ಅಳವಡಿಕೆಯ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯವು ೨೦೧೦ ರಲ್ಲೇ ನೀಡಿದ್ದ ತೀರ್ಪನ್ನು ಸರ್ಕಾರ ಅನುಷ್ಠಾನಗೊಳಿಸಿಲ್ಲ. ಈ ತೀರ್ಪಿನಂತೆ ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆಯ ಅನುಮತಿಯನ್ನು ಪಡೆಯದೇ ಮೊಬೈಲ್ ಗೋಪುರಗಳನ್ನು ನಿರ್ಮಿಸುವಂತಿಲ್ಲ. ಅದೇ ರೀತಿಯಲ್ಲಿ ಈ ಗೋಪುರಗಳು ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆಯನ್ನು ಪಾವತಿಸದೇ ಇರುವಂತಿಲ್ಲ. ನ್ಯಾಯಾಲಯ ನೀಡಿದ್ದ ಈ ತೀರ್ಪನ್ನು ಸರ್ಕಾರವು ಕಟ್ಟುನಿಟ್ಟಾಗಿ ಅನುಷ್ಠಾನಿಸಿದ್ದಲ್ಲಿ, ಕಾನೂನುಬಾಹಿರವಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸುವ ಸಾಧ್ಯತೆಗಳೇ ಇರಲಿಲ್ಲ!. 
ನಿಜ ಸ್ಥಿತಿ ಹೀಗಿದ್ದರೂ ಕಾನೂನುಬಾಹಿರವಾಗಿ ಮೊಬೈಲ್ ಗೋಪುರಗಳನ್ನು ನಿರ್ಮಿಸಿರಲು, ತತ್ಸಂಬಂಧಿತ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಅಥವಾ ರಾಜಕೀಯ ನೇತಾರರ ಭ್ರಷ್ಟಾಚಾರವೇ ಕಾರಣ ಈನುವುದರಲ್ಲಿ ಸಂದೇಹವಿಲ್ಲ. 

ಸಮಿತಿಯ ಸಲಹೆಗಳು 

ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳು ಹೊರಸೂಸುವ ಅತಿಯಾದ ಪ್ರಮಾಣದ ವಿದ್ಯುತ್ ಆಯಸ್ಕಾಂತೀಯ ಅಲೆಗಳು ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ತತ್ಪರಿಣಾಮವಾಗಿ ಉದ್ಭವಿಸುವ ಅನೆಕವಿಧದ ಗಂಭೀರ ಹಾಗೂ ಮಾರಕ ಕಾಯಿಲೆಗಳ ಸಾಧ್ಯತೆಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರವೇ ನೇಮಿಸಿದ್ದ ಸಮಿತಿಯೊಂದು, ಈ ಬಗ್ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿತ್ತು. ಸಮಿತಿಯು ಮೊಬೈಲ್ ದೂರವಾಣಿಗಳನ್ನು ಅತಿಯಾಗಿ ಬಳಸುವ ವ್ಯಕ್ತಿಗಳು, ಎಳೆಯ ಮಕ್ಕಳು, ಹದಿಹರೆಯದವರು ಮತ್ತು ಗರ್ಭಿಣಿಯರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವಂತೆ ಎಚ್ಚರಿಕೆಯನ್ನು ನೀಡಿತ್ತು. ಅದೇ ರೀತಿಯಲ್ಲಿ ಮೊಬೈಲ್ ಗೋಪುರಗಳ ಆಸುಪಾಸಿನಲ್ಲಿ ವಾಸಿಸುವವರು, ಇದರ ಹಾನಿಕಾರಕ ಪರಿಣಾಮಗಳನ್ನು ಅರಿತುಕೊಂಡು ಮುಂಜಾಗರೂಕತೆ ವಹಿಸಲು ಸಲಹೆಯನ್ನು ನೀಡಿತ್ತು. 

ಕೇಂದ್ರ ಸರ್ಕಾರವು ಈ ಸಮಸ್ಯೆಯ ಬಗ್ಗೆ ಅಧ್ಯಯನವನ್ನು ನಡೆಸಲು ಮತ್ತು ಸೂಕ್ತ ಪರಿಹಾರವನ್ನು ಸೂಚಿಸಲು ನಿಯೋಜಿಸಿದ್ದ ಅಂತರ್ ಸಚಿವಾಲಯಗಳ ಸಮಿತಿಯ ಅಧ್ಯಕ್ಷ ಹಾಗೂ ದೂರಸಂಪರ್ಕ ಇಲಾಖೆಯ ತಾಂತ್ರಿಕ ಸಲಹೆಗಾರರೂ ಆಗಿದ್ದ ರಾಮ್ ಕುಮಾರ್ ನೇತ್ರತ್ವದ ಸಮಿತಿಯು, ಮೊಬೈಲ್ ಗೋಪುರಗಳನ್ನು ಜನದಟ್ಟಣೆ ಹೆಚ್ಚಿರುವಲ್ಲಿ, ವಸತಿ ಪ್ರದೇಶಗಳಲ್ಲಿ, ಶಾಲೆ- ಕಾಲೇಜುಗಳು ಹಾಗೂ ಆಟದ ಮೈದಾನಗಳ ಆಸುಪಾಸಿನಲ್ಲಿ, ಮತ್ತು ಆಸ್ಪತ್ರೆಗಳ ಸಮೀಪದಲ್ಲಿ ನಿರ್ಮಿಸದಂತೆ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ೨೦೧೦ ರಲ್ಲೇ ಸೂಚಿಸಿತ್ತು. ಇದರೊಂದಿಗೆ ಈ ಗೋಪುರಗಳು ಹೊರಸೂಸುವ ವಿದ್ಯುತ್ ಆಯಸ್ಕಾಂತೀಯ ಅಲೆಗಳ ವಿಕಿರಣದ ಇತಿಮಿತಿಗಳನ್ನು ಪುನರ್ ವಿಮರ್ಶಿಸಿ, ನಮ್ಮ ದೇಶದ ಪರಿಸರ ಮತ್ತು ಇತರ ಸ್ಥಿತಿಗತಿಗಳಿಗೆ ಅನುಗುಣವಾಗಿರುವಂತೆ ನೂತನ ನೀತಿಯೊಂದನ್ನು ರೂಪಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 

ಮೊಬೈಲ್ ಗೋಪುರ ಮತ್ತು ದೂರವಾಣಿಗಳು ಹೊರಸೂಸುವ ವಿಕಿರಣದ ಅಪಾಯಗಳು ಮತ್ತು ಇವುಗಳಿಂದ ಉದ್ಭವಿಸಬಲ್ಲ ವಿವಿಧ ರೀತಿಯ ಕ್ಯಾನ್ಸರ್ ಮತ್ತಿತರ ಗಂಭೀರ ವ್ಯಾಧಿಗಳ ಬಗ್ಗೆ ಅದಾಗಲೇ ಪ್ರಕಟಗೊಂಡಿದ್ದ ಹಲವಾರು ಅಧ್ಯಯನಗಳ ವರದಿಗಳನ್ನು ಉಲ್ಲೇಖಿಸಿದ್ದ ಸಮಿತಿಯ ಅಧ್ಯಕ್ಷರು, ಮೊಬೈಲ್ ದೂರವಾಣಿಗಳನ್ನು ಅತಿಯಾಗಿ ಬಳಸುವ ಜನರು ಇಯರ್ ಫೋನ್ ಅಥವಾ ಹ್ಯಾಂಡ್ಸ್ ಫ್ರೀ ಉಪಕರಣಗಳನ್ನು ಬಳಸುವಂತೆ ಸಲಹೆಯನ್ನು ನೀಡಿದ್ದರು. ಇದಕ್ಕೂ ಮಿಗಿಲಾಗಿ ಸೆಲ್ಯುಲರ್ ಸೇವಾ ಸಂಸ್ಥೆಗಳು ತಮ್ಮ ಸಂಪರ್ಕ ಜಾಲವನ್ನು ವಿಸ್ತರಿಸುವ ಸಂದರ್ಭದಲ್ಲಿ, ಗಗನಚುಂಬಿ ಕಟ್ಟಡಗಳ ಮೇಲೆ ಅಳವಡಿಸುತ್ತಿರುವ ಅಧಿಕ ಶಕ್ತಿಯ ಪ್ರಸಾರಕಗಳಿಗೆ ಬದಲಾಗಿ ಕಡಿಮೆ ಶಕ್ತಿಯ ಮೈಕ್ರೋ ಸೆಲ್ ಪ್ರಸಾರಕಗಳನ್ನು ಬಳಸುವಂತೆ ಸಮಿತಿ ಸೂಚಿಸಿತ್ತು. ಇದಲ್ಲದೇ ವಿಕಿರಣದ ಸುರಕ್ಷತೆಯ ಮಾನದಂಡಗಳಿಗೆ ಅನುಗುಣವಾದ ಮೊಬೈಲ್ ದೂರವಾಣಿಗಳನ್ನು ಮಾತ್ರ ಆಮದು ಮಾಡುವ ಹಾಗೂ ದೇಶದಲ್ಲಿ ತಯಾರಿಸಿ ಮಾರಾಟ ಮಾಡುವಂತೆ ಇಂಡಿಯನ್ ಟೆಲಿಗ್ರಾಫ್ ಆಕ್ಟ್ ೧೯೮೫ ಕ್ಕೆ ಸೂಕ್ತ ತಿದ್ದುಪಡಿಯನ್ನು ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಸಲಹೆಯನ್ನು ನೀಡಿತ್ತು. ಸಮಿತಿಯ ಶಿಫಾರಸುಗಳನ್ನು ಅವಲೋಕಿಸಿದಾಗ ಮೊಬೈಲ್ ದೂರವಾಣಿಗಳು ಮತ್ತು ಇವುಗಳ ಸಂಪರ್ಕ ಗೋಪುರಗಳ ಹಾನಿಕಾರಕ ಪರಿಣಾಮಗಳ ಬಗ್ಗೆ ಸಾಕಷ್ಟು ಮುನ್ನೆಚರಿಕೆಯನ್ನು ವಹಿಸಬೇಕಾದ ಹೊಣೆಗಾರಿಕೆಯನ್ನು ಸರ್ಕಾರ ಸಮರ್ಪಕವಾಗಿ ನಿರ್ವಹಿಸಬೇಕಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮೊಬೈಲ್ ಸೇವಾ ಸಂಸ್ಥೆಗಳಿಗೆ ಕಡಿವಾಣವನ್ನು ತೊಡಿಸದ ಸರ್ಕಾರದ ಬೇಜವಾಬ್ದಾರಿ ಸ್ಪಷ್ಟವಾಗಿ ಗೋಚರಿಸುತ್ತದೆ.

ಹತ್ತಾರು ವರ್ಷಗಳ ಹಿಂದೆ ಮೊಬೈಲ್ ಸೇವಾ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಗೋಪುರಗಳ ನಿರ್ಮಾಣಕ್ಕೆ ಅಡ್ಡಿ ಆತಂಕಗಳನ್ನು ಓಡ್ದದಿರುವಂತೆ ಕೇಂದ್ರ ಸರ್ಕಾರವು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡಿದ್ದ ಪರೋಕ್ಷ ಸೂಚನೆಯಿಂದಾಗಿ, ದೇಶದ ಉದ್ದಗಲಕ್ಕೂ ಮೊಬೈಲ್ ಗೋಪುರಗಳು ನಾಯಿಕೊಡೆಗಳಂತೆ ತಲೆಎತ್ತಿದ್ದವು. ಈ ಸಂದರ್ಭದಲ್ಲಿ ಕಾನೂನುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದ ಸೇವಾ ಸಂಸ್ಥೆಗಳು, ವಸತಿ ಕಟ್ಟಡಗಳು, ಹೋಟೆಲ್ ಗಳು, ಕಾಲೇಜುಗಳು, ಜನದಟ್ಟನೆಯ ಪ್ರದೇಶಗಳು ಮತ್ತು ಆಸ್ಪತ್ರೆಗಳ ಕಟ್ಟಡಗಳ ಮೇಲೂ ತಮ್ಮ ಗೋಪುರಗಳನ್ನು ನಿರ್ಮಿಸಿದ್ದರು. ಸೇವಾ ಸಂಸ್ಥೆಗಳು ನೀಡಲಿರುವ ಸಹಸ್ರಾರು ರೂಪಾಯಿ ಮಾಸಿಕ ಬಾಡಿಗೆಯ ಆಸೆಗೆ ಮರುಳಾದ ಅನೇಕ ಜನರು ತಮ್ಮ ಕಟ್ಟಡಗಳ ಮೇಲೆ ಗೋಪುರಗಳನ್ನು ನಿರ್ಮಿಸಲು ಅನುಮತಿಯನ್ನು ನೀಡಿದ್ದರು.ವಿಶೇಷವೆಂದರೆ ಮೊಬೈಲ್ ಸೇವಾ ಸಂಸ್ಥೆಗಳು ಕೇಂದ್ರ ಸರ್ಕಾರದ ಔದಾರ್ಯವನ್ನು ದುರುಪಯೋಗಿಸುವ ಮೂಲಕ ಇಂದಿಗೂ ತಮಗೆ ಬೇಕಾದಲ್ಲಿ ಕಾನೂನುಬಾಹಿರವಾಗಿ ಸಂಪರ್ಕ ಗೋಪುರಗಳನ್ನು ನಿರ್ಮಿಸುತ್ತಿವೆ. ಹಾಗೂ ಇದೇ ಕಾರಣದಿಂದಾಗಿ ಇತ್ತೀಚಿಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ದಾವೆಯ ಪರಿಣಾಮವಾಗಿ, ನ್ಯಾಯಾಲಯವು ಸರ್ಕಾರಕ್ಕೆ ಚಾಟಿ ಬೀಸಿದೆ!. 

ಅದೇನೇ ಇರಲಿ, ಇದೀಗ ರಾಜ್ಯ ಸರ್ಕಾರವು ರಾಜ್ಯದ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ್ದ ಸಂಪರ್ಕ ಗೋಪುರಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜೊತೆಗೆ ನೂತನ ಗೋಪುರಗಳನ್ನು ನಿರ್ಮಿಸುವ ಮುನ್ನ ಸೇವಾ ಸಂಸ್ಥೆಗಳು ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಪರಿಪಾಲಿಸುವ, ಸ್ಥಳೀಯ ಸಂಸ್ಥೆಗಳಿಂದ ಅನುಮತಿಯನ್ನು ಪಡೆಯಲೇಬೇಕೆನ್ನುವ ಮತ್ತು ವರ್ಷಂಪ್ರತಿ ತೆರಿಗೆಯನ್ನು ಪಾವತಿಸುವಂತೆ ಮೊಬೈಲ್ ಸೇವಾ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕಿದೆ. 

ಡಾ.ಸಿ.ನಿತ್ಯಾನಂದ ಪೈ,ಪುತ್ತೂರು 



No comments:

Post a Comment