Tuesday, October 21, 2014

WORLD IODINE DEFICIENCY PRVENTION DAY



  ಅಕ್ಟೋಬರ್ ೨೧-ವಿಶ್ವ ಅಯೋಡಿನ್ ಕೊರತೆ ತಡೆಗಟ್ಟುವ ದಿನ

ಆಯೋಡಿನ್ ಯುಕ್ತ ಉಪ್ಪನ್ನು ಮಾರಾಟ ಮಾಡುತ್ತಿರುವ ಕೆಲ ಸಂಸ್ಥೆಗಳು ತಮ್ಮ ಉತ್ಪನ್ನದ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸುತ್ತಿರುವ ಜಾಹೀರಾತುಗಳು ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುತ್ತವೆ. ಏಕೆಂದರೆ ಈ ಉತ್ಪನ್ನಗಳಲ್ಲಿ ಇರುವ " ಅಯೋಡಿನ್ " ನ ಸೇವನೆಯಿಂದನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚುತ್ತದೆ ಎನ್ನುವ ಸಂದೇಶ ಈ ಜಾಹೀರಾತುಗಳಲ್ಲಿದೆ.

ಅಯೋಡಿನ್ ಮಿಶ್ರಿತ ಉಪ್ಪಿನ ಕೆಲ ಜಾಹೀರಾತುಗಳು ಘಂಟಾಘೋಷವಾಗಿ ಸಾರುವಂತೆ, ಇದರ ಸೇವನೆಯಿಂದ ನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚುವುದು ನಿಜವಾಗಿದ್ದಲ್ಲಿ ಭಾರತದ ಪ್ರತಿಯೊಂದು ಶಾಲಾಕಾಲೇಜುಗಳ ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ದರ್ಜೆಯಲ್ಲಿ ಉತ್ತೀರ್ಣನಾಗಲೇಬೇಕು. ಏಕೆಂದರೆ ಕಳೆದ ಹಲವಾರು ವರ್ಷಗಳಿಂದ ಇವರೆಲ್ಲರೂ ಕೇವಲ ಅಯೋಡಿನ್ ಮಿಶ್ರಿತ ಉಪ್ಪನ್ನೇ ಸೇವಿಸುತ್ತಿದ್ದಾರೆ. ಆದರೆ ದೇಶದ ಶಾಲಾಕಾಲೇಜುಗಳ ವಾರ್ಷಿಕ ಫಲಿತಾಂಶಗಳನ್ನು ಗಮನಿಸಿದಲ್ಲಿ, ಅಯೋಡಿನ್ ಮಿಶ್ರಿತ ಉಪ್ಪಿನ ತಯಾರಕರ ಜಾಹೀರಾತುಗಳು ಉತ್ಪ್ರೇಕ್ಷಿತ ಎನ್ನುವುದು ನಿಮಗೂ ಮನದಟ್ಟಾಗುತ್ತದೆ!.

ಜಗತ್ತಿನ ಅನೇಕ ರಾಷ್ಟ್ರಗಳ ಕೆಲವೊಂದು ಪ್ರಾಂತ್ಯಗಳ ನಿವಾಸಿಗಳನ್ನು ಪೀಡಿಸುತ್ತಿರುವ ಆರೋಗ್ಯದ ಸಮಸ್ಯೆಗಳಲ್ಲಿಅಯೋಡಿನ್ ಕೊರತೆಯಿಂದ ಉದ್ಭವಿಸಬಲ್ಲ ತೊಂದರೆಗಳೂ ಸೇರಿವೆ. ಈ ಸಮಸ್ಯೆಯು ವ್ಯಾಪಕವಾಗಿ ಕಂಡು ಬಂದಾಗ " ರೋಗವನ್ನು ತಡೆಗಟ್ಟುವುದು ಚಿಕಿತ್ಸೆಗಿಂತ ಉತ್ತಮ " ಎನ್ನುವಂತೆಅಯೋಡಿನ್ ಮಿಶ್ರಿತ ಉಪ್ಪಿನ ಸೇವನೆಯು ಅತ್ಯಂತ ಉಪಯುಕ್ತವೆನಿಸುವುದು.

ಆದರೆ "  ಅತಿಯಾದರೆ ಅಮೃತವೂ ವಿಷವೆನಿಸಬಲ್ಲದು " ಎನ್ನುವ ಆಡುಮಾತಿನಂತೆಅಯೋಡಿನ್ ಮಿಶ್ರಿತ ಉಪ್ಪಿನ ಅತಿಯಾದ ಸೇವನೆಯೂ ಗಂಭೀರ  ಆರೋಗ್ಯದ ಸಮಸ್ಯೆಗಳನ್ನು ಸೃಷ್ಠಿಸಬಲ್ಲದು.

ಅಯೋಡಿನ್ ಸೇವನೆ ಅವಶ್ಯಕವೇ?

ಮನುಷ್ಯನ ಶರೀರ - ಆರೋಗ್ಯಗಳಿಗೆ ಅತ್ಯವಶ್ಯಕವೆನಿಸುವ ಸೂಕ್ಷ್ಮ ಪೋಷಕಾಂಶಗಳಲ್ಲಿಅಯೋಡಿನ್ ಒಂದಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ದಿನನಿತ್ಯ ಸೇವಿಸುವ ವಿವಿಧ ಹಸಿರು ಸೊಪ್ಪುಗಳು, ತಾಜಾ ತರಕಾರಿಗಳುಹಾಲು ಮತ್ತು ಮೀನುಗಳಲ್ಲಿ ಅಲ್ಪ ಪ್ರಮಾಣದ ಅಯೋಡಿನ್ ಇರುತ್ತದೆ.
ಕಾರಣಾಂತರಗಳಿಂದ ನಮ್ಮ ಶರೀರಕ್ಕೆ ಲಭ್ಯವಾಗುವ ಅಯೋಡಿನ್ ಪ್ರಮಾಣದಲ್ಲಿ ಕೊರತೆಯುಂಟಾದಾಗಥೈರಾಯ್ಡ್ ಗ್ರಂಥಿಯ ಹಿಗ್ಗುವಿಕೆ, ಮಕ್ಕಳಲ್ಲಿ ಶಾರೀರಿಕ - ಮಾನಸಿಕ ಬೆಳವಣಿಗೆಗಳು ಕುಂಠಿತಗೊಳ್ಳುವುದು ಹಾಗೂ ವಾಕ್ - ಶ್ರವಣ ದೋಷಗಳು ಕಂಡುಬರುತ್ತವೆ. ವಿಶೇಷವಾಗಿ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣ, ಎಳೆಯ ಕಂದಮ್ಮಗಳು ಮತ್ತು ಬೆಳೆಯುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆಗಳಂತಹ ಸಮಸ್ಯೆಗಳು ಅಯೋಡಿನ್ ಕೊರತೆಯಿಂದ ಉದ್ಭವಿಸುವ ಸಾಧ್ಯತೆಗಳಿವೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ್ದ ಅಂಕಿ ಅಂಶಗಳಂತೆವರ್ಷಂಪ್ರತಿ ಜಗತ್ತಿನಾದ್ಯಂತ ೧೪೦ ದಶಲಕ್ಷ ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಾರೆ. ಭಾರತ ಸರ್ಕಾರವು ಇತ್ತೀಚಿಗೆ ನಡೆಸಿದ್ದ ಸಮೀಕ್ಷೆಯಂತೆ ೬೪ ದಶಲಕ್ಷ ಭಾರತೀಯರು ಈ ಸಮಸ್ಯೆಯಿಂದ ಪೀಡಿತರಾಗಿದ್ದಾರೆ.

ಅಯೋಡಿನ್ ಕೊರತೆಯಿಂದಾಗಿ ಉದ್ಭವಿಸಬಲ್ಲ ಆರೋಗ್ಯದ ಸಮಸ್ಯೆಗಳನ್ನು ಅಯೋಡಿನ್ ಮಿಶ್ರಿತ ಉಪ್ಪಿನ ಸೇವನೆಯಿಂದ ಸುಲಭದಲ್ಲೇ ತಡೆಗಟ್ಟಬಹುದು. ಭಾರತದ ಕೆಲರಾಜ್ಯಗಳು ಮತ್ತು ಕೆಲವು ಪ್ರಾಂತ್ಯಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದ್ದ ಈ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿಯೇ, ಕೇಂದ್ರ ಸರ್ಕಾರವು ಹಲವಾರು ವರ್ಷಗಳ ಹಿಂದೆಯೇ ಅಯೋಡಿನ್ ಮಿಶ್ರಿತ ಉಪ್ಪಿನ ಮಾರಾಟವನ್ನು ಕಡ್ಡಾಯಗೊಳಿಸುವುದರೊಂದಿಗೆಸಾಮಾನ್ಯ ಅಡುಗೆ ಉಪ್ಪಿನ ಮಾರಾಟವನ್ನೇ ನಿಷೇಧಿಸಿತ್ತು.

ದಾರಿತಪ್ಪಿಸುವ ಜಾಹೀರಾತುಗಳು

ಇತ್ತೀಚಿಗೆ ವಿವಿದ್ಹ್ ಮಾಧ್ಯಮಗಳ ಮೂಲಕ ವಿಶಿಷ್ಠ ಜಾಹೀರಾತುಗಳನ್ನು ನೀಡುತ್ತಿರುವ ಕೆಲ ಅಯೋಡಿನ್ ಮಿಶ್ರಿತ ಉಪ್ಪಿನ ತಯಾರಕರು, ನಿಶ್ಚಿತವಾಗಿಯೂ ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಇಂತಹ ಜಾಹೀರಾತುಗಳಲ್ಲಿ ತಮ್ಮ ಸಂಸ್ಥೆಯು ತಯಾರಿಸಿ ಮಾರಾಟಮಾಡುವ " ಅಯೋಡಿನ್ ಮಿಶ್ರಿತ " ಉಪ್ಪಿನಲ್ಲಿ ನಿಮ್ಮ ಮಕ್ಕಳ ಬುದ್ಧಿಶಕ್ತಿ, ಚಟುವಟಿಕೆಗಳು ಹಾಗೂ ಶಾರೀರಿಕ ಬೆಳವಣಿಗೆಯನ್ನು ಹೆಚ್ಚಿಸುವ ಮತ್ತು ಮೆದುಳನ್ನು ಚುರುಕಾಗಿಸುವ " ಶಕ್ತಿ " ಇದೆಯೆಂದು ಘಂಟಾಘೋಷವಾಗಿ ಸಾರುತ್ತಿದ್ದಾರೆ.ಜೊತೆಗೆ ತಮ್ಮ ಉತ್ಪನ್ನದ ಕಣಕಣಗಳಲ್ಲೂ  ಅಯೋಡಿನ್ ಸರಿಯಾದ ಪ್ರಮಾಣದಲ್ಲಿದ್ದು, " ನಿಮ್ಮ ಮಕ್ಕಳನ್ನು ಮಾಡುತ್ತದೆ ಸ್ಮಾರ್ಟ್ " ಎಂದು ಸಾರಿ ಹೇಳಲಾಗುತ್ತಿದೆ!.

ನಿಜ ಹೇಳಬೇಕಿದ್ದಲ್ಲಿ ಅಯೋಡಿನ್ ಮಿಶ್ರಿತ ಉಪ್ಪನ್ನು ತಯಾರಿಸುವಾಗ ಒಂದು ಟನ್ ಉಪ್ಪಿಗೆ ಬೆರೆಸುವ " ಪೊಟಾಸಿಯಂ ಆಯೋಡೆಟ್ " ಣ ಪ್ರಮಾಣವು ಕೇವಲ ೫೦ ಗ್ರಾಂ ಆಗಿರುತ್ತದೆ!. ಅಯೋಡಿನ್ ಮಿಶ್ರಿತ ಉಪ್ಪಿನ ಪೊಟ್ಟಣಗಳ ಹೊರಕವಚಗಳ  ಮೇಲೆ ಇದರಲ್ಲಿರುವ ಅಯೋಡಿನ್ ನ ಪ್ರಮಾಣವನ್ನು ೧೫ ಅಥವಾ ೩೦ ಪಿ.ಪಿ.ಎಂ ಎಂದು ನಮೂದಿಸಿರುವುದನ್ನು ಪ್ರಾಯಶಃ ನೀವೂ ಗಮನಿಸಿರಲಾರಿರಿ. ಪಿ.ಪಿ.ಎಂ ಎಂದರೆ ಪಾರ್ಟಿಕಲ್ ಪರ್ ಮಿಲಿಯನ್ ಎಂದರ್ಥ. ಅರ್ಥಾತ್, ಒಂದು ಮಿಲಿಯನ್ ಉಪ್ಪಿನ ಕಣಗಳಲ್ಲಿ ಕೇವಲ ೧೫ ಅಥವಾ ೩೦ ಪೊಟಾಸಿಯಂ ಅಯೋಡೆಟ್ ನ ಕಣಗಳು ಇರುತ್ತವೆ. ನಿಜಸ್ಥಿತಿ ಹೀಗಿರುವಾಗ ಈ ಉಪ್ಪಿನ ಪೊಟ್ಟಣದಲ್ಲಿನ ಪ್ರತಿಯೊಂದು ಉಪ್ಪಿನ ಕಣಗಳಲ್ಲೂ ಅಯೋಡಿನ್ ಇರುವುದು ಅಸಾಧ್ಯವಲ್ಲವೇ?.
ಇಷ್ಟು ಮಾತ್ರವಲ್ಲ, ಈ ಜಾಹೀರಾತನ್ನು ನಿಜವೆಂದು ನಂಬಿದ ಅಮಾಯಕರು ತಮ್ಮ ಮಕ್ಕಳಿಗೆ ದಿನನಿತ್ಯ ನೀಡುವ ಆಹಾರ ಪದಾರ್ಥಗಳಲ್ಲಿ ಬಳಸುವ ಉಪ್ಪಿನ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಗಳೂ ಇವೆ. ತತ್ಪರಿಣಾಮವಾಗಿ ಈ ಮಕ್ಕಳಿಗೆ ಅಲ್ಪಾವಧಿಯಲ್ಲೇ ಕೆಲವೊಂದು ಆರೋಗ್ಯದ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಏಕೆಂದರೆ ಅಯೋಡಿನ್ ಹಾಗೂ ಉಪ್ಪು, ಇವೆರಡರ ಅತಿಸೇವನೆಯು ನಿಶ್ಚಿತವಾಗಿಯೂ ಅನಾರೋಗ್ಯಕ್ಕೆ ಕಾರಣವೆನಿಸುತ್ತದೆ.

ಅತಿಸೇವನೆಯ ತೊಂದರೆಗಳು

ಅಯೋಡಿನ್ ಮಿಶ್ರಿತ ಉಪ್ಪಿನ ಅತಿಯಾದ ಸೇವನೆಯಿಂದ " ಹೈಪೋ ಥೈರಾಯ್ದಿಸ್ಮ್ " ಅರ್ಥಾತ್, Iodine induced hypothyroidism (IIH) , ಎನ್ನುವ ಸಮಸ್ಯೆ ಉದ್ಭವಿಸಬಲ್ಲದು. ತತ್ಪರಿಣಾಮವಾಗಿ ಶರೀರಕ್ಕೆ ಅತ್ಯವಶ್ಯಕವೆನಿಸುವ ಜೀವಸತ್ವಗಳ ಬೇಡಿಕೆ ಹೆಚ್ಚುವುದರಿಂದತತ್ಸಂಬಂಧಿತ ಜೀವಸತ್ವಗಳ ಕೊರತೆಯೂ ಉಂಟಾಗಬಹುದು. ಇದಲ್ಲದೆ ಅತಿಯಾದ ಹಸಿವು ಹಾಗೂ ಇದರಿಂದಾಗಿ ಅತಿಆಹಾರ ಸೇವನೆ ಮತ್ತು ಭೇದಿ, ಮಾಂಸಪೇಶಿಗಳಲ್ಲಿ ನಡುಕ, ಅತಿ ಆಯಾಸ, ನರ - ಮಾನಸಿಕ ತೊಂದರೆಗಳಾದ ಖಿನ್ನತೆ, ಉದ್ವೇಗಗಳಂತಹ ಸಮಸ್ಯೆಗಳೂ ತಲೆದೋರಬಹುದು.

ಇವೆಲ್ಲಕ್ಕೂ ಮಿಗಿಲಾಗಿ ಹೃದಯ - ರಕ್ತನಾಳಗಳಿಗೆ ಸಂಬಂಧಿಸಿದ ಗಂಭೀರ ತೊಂದರೆಗಳು, ಅಧಿಕ ರಕ್ತದೊತ್ತಡ, ಮೂಲೆಗಳ ಸವೆತ ಹಾಗೂ ದೌರ್ಬಲ್ಯ ಮತ್ತು ಕೆಲವಿಧದ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳು ಕೇವಲ ಅತಿಯಾದ ಉಪ್ಪಿನ ಸೇವನೆಯಿಂದಲೇ ಉದ್ಭವಿಸಬಲ್ಲವು.


ವಯಸ್ಕರಲ್ಲಿ ಅಧಿಕ ರಕ್ತದೊತ್ತಡ ಆರಂಭವಾಗಲು ಮತ್ತು ಹೆಚ್ಚಲು ತುಸು ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದು ಕೂಡಾ ಕಾರನವೆನಿಸಬಲ್ಲದು. ಇತ್ತೀಚಿಗೆ ನಡೆಸಿದ್ದ ಸಂಶೋಧನೆಗಳ ವರದಿಗಳಂತೆ, ಉಪ್ಪನ್ನು ಧಾರಾಳವಾಗಿ ಬಳಸಿ ತಯಾರಿಸಿದ ಆಹಾರಗಳನ್ನು ಅತಿಯಾಗಿ ಸೇವಿಸುವ ಮಕ್ಕಳಿಗೆಮುಂದೆ ಎಂದಾದರೂ ಅಧಿಕ ರಕ್ತದೊತ್ತಡ ಬಾಧಿಸುವ ಹಾಗೂ ಪಕ್ಷವಾತ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಹೃದಯದ ವೈಫಲ್ಯಗಳಂತಹ ತೊಂದರೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಈ ರೀತಿಯ ಗಂಭೀರ - ಮಾರಕ ಆರೋಗ್ಯದ ತೊಂದರೆಗಳಿಗೆ ಕಾರಣವೆನಿಸಬಲ್ಲ ಉಪ್ಪನ್ನು, ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಅತಿಯಾಗಿ ಬಳಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎನ್ನುವುದನ್ನು ಮರೆಯದಿರಿ.

೧೯೯೦ ರಲ್ಲಿ ಆಫ್ರಿಕಾ ಖಂಡದ ಅನೇಕ ದೇಶಗಳಲ್ಲಿ ಅಯೋಡಿನ್ ಮಿಶ್ರಿತ ಉಪ್ಪಿನ ಅತಿಯಾದ ಸೇವನೆಯಿಂದಾಗಿ I I A " ಸಮಸ್ಯೆಯು ವ್ಯಾಪಕವಾಗಿ ಕಂಡುಬಂದಿತ್ತು. ೧೯೯೫ ರಲ್ಲಿ ಜಿಂಬಾಬ್ವೆ ದೇಶದಲ್ಲಿ ಇದೆ ಕಾರಣದಿಂದಾಗಿ ಈ ಸಮಸ್ಯೆಯ ಪ್ರಮಾಣವು ಶೇ. ೨೭ ರಷ್ಟು ಹೆಚ್ಚಿತ್ತು.

ಅಮೇರಿಕ, ಇಂಗ್ಲೆಂಡ್, ಜರ್ಮನಿ, ಜಪಾನ್, ಇಟಲಿ, ಆಸ್ಟ್ರೇಲಿಯ, ಸ್ವಿಟ್ಜರ್ಲೆಂಡ್ ಇವೆ ಮುಂತಾದ ದೇಶಗಳು ೧೯೪೦ ರಲ್ಲೇ ಅಯೋಡಿನ್ ಮಿಶ್ರಿತ ಉಪ್ಪಿನ ಕಡ್ಡಾಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದವು. ಅಮೇರಿಕ ಹಾಗೂ ಇಂಗ್ಲೆಂಡ್ ದೇಶಗಳಲ್ಲಿ " ಹೈಪರ್ ಥೈರಾಯ್ದಿಸ್ಮ್ " ನಿಂದಾಗಿ ಅನೇಕ ಪ್ರಜೆಗಳು ಮೃತಪಟ್ಟಿದ್ದುದೇ ಈ ನಿರ್ಧಾರಕ್ಕೆ ಕಾರಣವೆನಿಸಿತ್ತು.

ಭಾರತದಲ್ಲಿ I I H " ಸಮಸ್ಯೆಯ ಬಗ್ಗೆ ಸಮರ್ಪಕವಾದ ಮಾಹಿತಿಯೇ ಲಭ್ಯವಿಲ್ಲಡ ಕಾರಣದಿಂದಾಗಿಈ ಬಗ್ಗೆ ಖಚಿತ ಮಾಹಿತಿ ಅಥವಾ ಅಂಕಿ ಅಂಶಗಳನ್ನು ನೀಡುವುದು ಅಸಾಧ್ಯವೂ ಹೌದು. ಆದರೆ ಬಹುತೇಕ ಭಾರತೀಯರು " ಉಪ್ಪಿಗಿಂತ ರುಚಿಯಿಲ್ಲ ...." ಎನ್ನುವ ಆಡುಮಾತಿನಂತೆಸ್ವಾಭಾವಿಕವಾಗಿಯೇ ತುಸು ಅಧಿಕ ಪ್ರಮಾಣದಲ್ಲಿ ಉಪ್ಪನ್ನು ಸೇವಿಸುವುದರಿಂದಅಯೋಡಿನ್ ಮಿಶ್ರಿತ ಉಪ್ಪಿನ ಸೇವನೆಯ ಬಗ್ಗೆ ಸಾಕಷ್ಟು ಮುಂಜಾಗರೂಕತೆ ವಹಿಸುವುದು ಆರೋಗ್ಯ ರಕ್ಷಣೆಯ ದೃಷ್ಠಿಯಿಂದ ಹಿತಕರವೆನಿಸೀತು!.

ಅಯೋಡಿನ್ ಮಿಶ್ರಿತ ಉಪ್ಪು

ನೀವು ಸಾಮಾನ್ಯವಾಗಿ ಅಡುಗೆಗಾಗಿ ಬಳಸುವ " ಅಡುಗೆ ಉಪ್ಪು " ಅರ್ಥಾತ್ ಸೋಡಿಯಂ ಕ್ಲೋರೈಡ್ ಗೆ ನಿರ್ದಿಷ್ಟ ಪ್ರಮಾಣದ " ಪೊಟಾಸಿಯಂ ಅಯೋಡೆಟ್ " ನ್ನು ಬೆರೆಸುವ ಮೊಲಕ ಅಯೋಡಿನ್ ಮಿಶ್ರಿತ ಉಪ್ಪನ್ನು ಸಿದ್ಧಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಒಂದು ಮೆಟ್ರಿಕ್ ಟನ್ ಉಪ್ಪಿಗೆ ಬೆರೆಸುವ ಪೊಟಾಸಿಯಂ ಅಯೋಡೆಟ್ ಣ ಪ್ರಮಾಣವು ಕೇವಲ ೫೦ ಗ್ರಾಂ ಗಳಾಗಿರುತ್ತದೆ.

ಈ ಮಿಶ್ರಣವನ್ನು ಮೂರು ವಿಧಗಳಲ್ಲಿ ತಯಾರಿಸಬಹುದಾಗಿದೆ. ಇವುಗಳಲ್ಲಿ ಮೊದಲನೆಯದಾದ ಒಣ ಮಿಶ್ರಣ ವಿಧಾನದಲ್ಲಿ ಇವೆರಡೂ ದ್ರವ್ಯಗಳನ್ನು " ಸ್ಕ್ರ್ಯೂ ಕನ್ವೇಯರ್ " ಗಳನ್ನು ಬಳಸಿ ಮಿಶ್ರಣ ಮಾಡಲಾಗುತ್ತದೆ. ಸ್ಪ್ರೇ ಮಿಕ್ಸಿಂಗ್ ವಿಧಾನದಲ್ಲಿ ಪೊಟಾಸಿಯಂ ಆಯೋಡೆಟ್ ದ್ರಾವಣವನ್ನು ಬೆಲ್ಟ್ ಕನ್ವೇಯರ್ ಗಳ ಮೂಲಕ ಬೀಳುವ ಉಪ್ಪ್ಗೆ ಸಿಂಪಡಿಸಿದ ಬಳಿಕ ಮತ್ತೆ ಸ್ಕ್ರ್ಯೂ ಕನ್ವೇಯರ್ ಗಳಲ್ಲಿ ಮಿಶ್ರ ಮಾಡಲಾಗುತ್ತದೆ. ಸಬ್ಮರ್ಶನ್ ವಿಧಾನದಲ್ಲಿ ಒಂದು ಟ್ಯಾಂಕ್ ನಲ್ಲಿ ಉಪ್ಪು ಮತ್ತು ಪೊಟಾಸಿಯಂ ಆಯೋಡೆಟ್ ದ್ರಾವಣಗಳನ್ನು ಬೆರೆಸಿ ತಯಾರಿಸಿದ ಹರಳುಗಳನ್ನು ಸಂಗ್ರಹಿಸಿ ಒಣಗಿಸಲಾಗುತ್ತದೆ.

ಆದರೆ ಜನರು ಮೆಚ್ಚಿ ಖರೀದಿಸುವ " ಸರಾಗವಾಗಿ ಹರಿಯುವ " ( Free flowing ) ಉಪ್ಪಿನ ಹುಡಿ  ದುಬಾರಿ ಬೆಲೆಗೆ ಮಾರಾಟವಾಗುತ್ತದೆ. ಅಯೋಡಿನ್ ಮಿಶ್ರಿತ ಉಪ್ಪಿನ ಹರಳುಗಳ ಒಂದು ಕಿಲೋಗ್ರಾಂ ಪೊಟ್ಟಣಕ್ಕೆ ಸುಮಾರು ೩ ರೂಪಾಯಿ ಬೆಲೆಯಿದ್ದಲ್ಲಿ, ಉಪ್ಪಿನ ಹುಡಿಯ ಪೊಟ್ಟಣಕ್ಕೆ ೬ ರಿಂದ ೯ ರೂಪಾಯಿ ಬೆಲೆಯಿದೆ.
ಉಪ್ಪಿನ ಹರಳುಅಗಳನ್ನು ಹುಡಿ ಮಾಡಿದರೂ ಇವುಗಳ ಕಣಗಳು ಏಕರೀತಿಯದ್ದಾಗಿ ಇರುವುದಿಲ್ಲ. ಇದೇ  ಕಾರಣದಿಂದಾಗಿ ಮತ್ತು ಉಪ್ಪು ತೇವಾಂಶವನ್ನು ಕ್ಷಿಪ್ರಗತಿಯಲ್ಲಿ ಹೀರಿಕೊಳ್ಳುವುದರಿಂದ, ಈ ಉಪ್ಪಿನ ಹುಡಿಯು ಸರಾಗವಾಗಿ ಹರಿಯುವಂತೆ ಮಾಡಲು ಮತ್ತು ಅಚ್ಚ ಬಿಳಿಯ ಬಣ್ಣದ್ದಾಗಿ ಕಾಣಿಸಲುಇವುಗಳ ತಯಾರಕರು ಒಂದಿಷ್ಟು ಹೆಚ್ಚುವರಿ ಹಣವನ್ನು ವ್ಯಯಿಸಿ, ದುಪ್ಪಟ್ಟು ಲಾಭವನ್ನು ಗಳಿಸುತ್ತಾರೆ!.

ಕೊನೆಯ ಮಾತು

ಅಯೋಡಿನ್ ಮಿಶ್ರಿತ ಉಪ್ಪಿನ ಸೇವನೆಯನ್ನೇ ವಿರೋಧಿಸುವುದು ಈ ಲೇಖನದ ಉದ್ದೇಶವಲ್ಲ. ಆದರೆ ಅಯೋಡಿನ್ ಕೊರತೆಯಿಂದ ಉದ್ಭವಿಸಬಲ್ಲ Iodine deficiency disorder ನಂತಹ ಗಂಭೀರ ಸಮಸ್ಯೆಯನ್ನು ತಡೆಗಟ್ಟಲು ಉಪಯುಕ್ತವೆನಿಸುವಅಯೋಡಿನ್ ಮಿಶ್ರಿತ ಉಪ್ಪಿನ ತಯಾರಕರು ನೀಡುತ್ತಿರುವ ಜಾಹೀರಾತುಗಳಲ್ಲಿ ನಮೂದಿಸದ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವುದೇ ನಮ್ಮ ಉದ್ದೇಶವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ,  ಒಂದು ದೇಶದ ಪ್ರಜೆಗಳನ್ನು ಬಾಧಿಸುತ್ತಿರುವ ಅಯೋಡಿನ್ ಕೊರತೆಯಿಂದ ಉದ್ಭವಿಸಬಲ್ಲ ಸಮಸ್ಯೆಗಳನ್ನುಅಯೋಡಿನ್ ಮಿಶ್ರಿತ ಉಪ್ಪಿನ ಸಾರ್ವತ್ರಿಕ ಬಳಕೆಯಿಂದ ಸುಲಭದಲ್ಲೇ ನೀಗಿಸಬಹುದು. ಅದೇ ರೀತಿಯಲ್ಲಿ ಇದರ ಸೇವನೆಯ ಲಾಭದೊಂದಿಗೆ ತುಲನೆ ಮಾಡಿದಾಗಇದರ ಅತಿಸೇವನೆಯಿಂದ ಉದ್ಭವಿಸಬಲ್ಲ ತೊಂದರೆಗಳು ನಗಣ್ಯವೆನಿಸುತ್ತವೆ.

ಆದರೂ ಭಾರತದಲ್ಲಿ ಅಯೋಡಿನ್ ಮಿಶ್ರಿತ ಉಪ್ಪಿನ ಅತಿಸೇವನೆಯಿಂದ ಉದ್ಭವಿಸಿರಬಹುದಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಅತ್ಯವಶ್ಯಕವೆನಿಸುವ ಸಮೀಕ್ಷೆ- ಅಧ್ಯಯನಗಳನ್ನು ನಡೆಸಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಅಯೋಡಿನ್ ಮಿಶ್ರಿತ ಉಪ್ಪಿನ ಕಡ್ಡಾಯ ಮಾರಾಟದ ನಿರ್ಧಾರವನ್ನು ಪ್ರಶ್ನಿಸಿದ ಅರ್ಜಿಯೊಂದನ್ನು ಸರ್ವೋಚ್ಛ ನ್ಯಾಯಾಲಯವು ಇತ್ತೀಚಿಗೆ ವಿಚಾರಣೆಗಾಗಿ ಅಂಗೀಕರಿಸಿದೆ. ಆದರೆ ಇದಕ್ಕೂ ಮುನ್ನ ಜನಸಾಮಾನ್ಯರನ್ನು ದಾರಿತಪ್ಪಿಸುವ ಜಾಹೀರಾತುಗಳನ್ನು ನಿಷೆಧಿಸಬೇಕಾದ ಹೊಣೆಗಾರಿಕೆ ಕೇಂದ್ರ ಸರ್ಕಾರದ ಮೇಲಿದೆ.

ಡಾ.ಸಿ.ನಿತ್ಯಾನಂದ ಪೈ, ಪುತ್ತೂರು

ಉದಯವಾಣಿ ಪತ್ರಿಕೆಯ ದಿ. ೧೪-೦೬-೨೦೦೭ ರ ಸಂಚಿಕೆಯ ಬಳಕೆದಾರ : ಸಮಸ್ಯೆ - ಸಮಾಧಾನ ಅಂಕಣದಲ್ಲಿ ಪ್ರಕಟಿತ ಲೇಖನ .




No comments:

Post a Comment