Tuesday, October 15, 2013

Bottled water- Problems galore!




                              ಬಾಟಲಿ ನೀರು: ಸಮಸ್ಯೆಗಳು ನೂರಾರು!

   ಒಂದೆರಡು ದಶಕಗಳ ಹಿಂದಿನ ತನಕ ದಕ್ಷಿಣ ಕನ್ನಡ ಜಿಲ್ಲೆಯ ಜನರು ತಮ್ಮ ಮನೆಗಳಿಗೆ ಬಂದ ಅತಿಥಿಗಳಿಗೆ ಕುದಿಸಿ ತಣಿಸಿದ ನೀರಿನೊಂದಿಗೆ ಬೆಲ್ಲವನ್ನು ನೀಡುವ ನೀಡುವ ಸಂಪ್ರದಾಯವಿತ್ತು. ಅತಿಥಿಗಳ ದಣಿವು ಮತ್ತು ಬಾಯಾರಿಕೆಗಳನ್ನು ನೀಗಿಸಲು ಇದು ಉಪಯುಕ್ತವೆನಿಸುತ್ತಿತ್ತು. 

ಆದರೆ ಇಂದು ಬೆಲ್ಲ ಮತ್ತು ನೀರಿನ ಸ್ಥಾನವನ್ನು ಲಘುಪಾನೀಯ ಅಥವಾ ಬಾಟಲೀಕರಿಸಿದ ಕುಡಿಯುವ ನೀರು ಆಕ್ರಮಿಸಿಕೊಂಡಿರುವುದರಿಂದ, ಹಿಂದಿನ ಸಂಪ್ರದಾಯ ಕಣ್ಮರೆಯಾಗಿದೆ. ಜೊತೆಗೆ ಖಾಸಗಿ- ಸರಕಾರೀ ಸಮಾರಂಭಗಳು ಮತ್ತಿತರ ಕಾರ್ಯಕ್ರಮಗಳಲ್ಲಿ, ವೇದಿಕೆಯಲ್ಲಿರುವ ಗಣ್ಯರು- ಅತಿಥಿಗಳ ಮುಂದೆ ಕುಡಿಯುವ ನೀರಿನ ಬಾಟಲಿಗಳು ರಾರಾಜಿಸುತ್ತಿವೆ. ಬಹುತೇಕ ಜನರು ಪರಿಶುದ್ಧವಾಗಿದೆ ಎಂದು ಎಂದು ನಂಬಿರುವ ಈ ಬಾಟಲಿ ನೀರಿನ ಬಳಕೆ ವ್ಯಾಪಕವಾಗಿ ಹೆಚ್ಚಲು ನಿರ್ದಿಷ್ಟ ಕಾರಣಗಳೂ ಇವೆ. 

ಆರೋಗ್ಯ ರಕ್ಷಣೆ 

ಮನುಷ್ಯನು ತನ್ನ ಆರೋಗ್ಯದ ರಕ್ಷಣೆಗಾಗಿ ಅನೇಕ ಮಾರ್ಗೋಪಾಯಗಳನ್ನು ಕಂಡುಹಿಡಿದಿದ್ದಾನೆ. ಇವುಗಳಲ್ಲಿ ಪ್ರಾನಾಪಾಯಕ್ಕೂ ಕಾರಣವೇನಿಸಬಲ್ಲ "ಜಲಜನ್ಯ ಕಾಯಿಲೆ" ಗಳಿಂದ ರಕ್ಷಿಸಿಕೊಳ್ಳಲು ಕುಡಿಯುವ ನೀರನ್ನು ಶುದ್ಧೀಕರಿಸಿ ಸುರಕ್ಷಿತವನ್ನಾಗಿಸುವುದೂ ಒಂದಾಗಿದೆ. 

ನಾವು ಕುಡಿಯಲು ಬಳಸುವ ನೀರನ್ನು ಶುದ್ಧೀಕರಿಸಲು ವಿವಿಧ ತಂತ್ರಗಳು- ಯಂತ್ರಗಳು ಲಭ್ಯವಿದೆ. ಆದರೆ ನೀರನ್ನು ತೆಳ್ಳಗಿನ ಬಟ್ಟೆಯಲ್ಲಿ ಸೋಸಿ, ಒಲೆಯ ಮೇಲಿರಿಸಿ, ಕುಡಿಯಲು ಆರಂಭವಾದ ಬಳಿಕ ಸುಮಾರು ೨೦ ನಿಮಿಷಗಳ ಕಾಲ ಕುದಿಸಿದ ಬಳಿಕ ತಣಿಸಿ ಬಳಸುವುದು ನಿಶ್ಚಿತವಾಗಿಯೂ ಆರೋಗ್ಯಕರ ಎನ್ನುವುದರಲ್ಲಿ ಸಂದೇಹವಿಲ್ಲ. 

ಆದರೆ ಇಂದು ಬಹುತೇಕ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಕ್ಯಾಂಡಲ್ ಫಿಲ್ಟರ್, ನೀರಿನ ನಲ್ಲಿಗೆ ಜೋಡಿಸುವ ಪುಟ್ಟ ಫಿಲ್ಟರ್, ಅಲ್ಟ್ರಾ ವಯೊಲೆಟ್ ಕಿರಣಗಳು ಅಥವಾ ರಿವರ್ಸ್ ಓಸ್ಮೊಸಿಸ್ ತಂತ್ರಜ್ಞಾನವನ್ನು ಬಳಸಿ ನಿರ್ಮಿತವಾದ ಉಪಕರಣಗಳನ್ನು ಬಳಸಲು ಆರಂಭಿಸಿದ್ದಾರೆ. ಇನ್ನು ಕೆಲವರಂತೂ ಮಾರುಕಟ್ಟೆಯಲ್ಲಿ ದೊರೆಯುವ ಶುದ್ಧೀಕರಿಸಿದ ಕುಡಿಯುವ ನೀರಿನ ಬಾಟಲಿಗಳು ಅಥವಾ ಜಾಡಿಗಳನ್ನೇ ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಕುಡಿಯುತ್ತಾರೆ. ಅದೇ ರೀತಿಯಲ್ಲಿ ವಿಭಿನ್ನ ವಿಧಾನಗಳನ್ನು ಬಳಸುತ್ತಿರುವ ಪ್ರತಿಯೊಬ್ಬರೂ, ತಾವು ಪರಿಶುದ್ಧವಾದ ನೀರನ್ನೇ ಕುಡಿಯುತ್ತಿದ್ದೇವೆ ಎಂದು ಧೃಢವಾಗಿ ನಂಬುತ್ತಾರೆ. ಇವೆಲ್ಲಕ್ಕೋ ಮಿಗಿಲಾಗಿ ಪರಿಸರ ಪ್ರದೂಷಣೆಯಿಂದಾಗಿ ಕಲುಷಿತಗೊಂಡ ನೀರನ್ನು ಕುಡಿದು ಕಾಯಿಲೆಗಳನ್ನು ಆಹ್ವಾನಿಸುವ ಬದಲಾಗಿ, "ಬಾಟಲೀಕರಿಸಿದ ನೀರು" ಬಳಸುವ ಮೂಲಕ ಇನ್ನಷ್ಟು ಪರಿಸರ ಪ್ರದೂಷಣೆಗೆ ಕಾರಣಕರ್ತರೆನಿಸುತ್ತಾರೆ!. 

ವಾಣಿಜ್ಯ ಸರಕು 

ಶ್ರೀಮಂತ ರಾಷ್ಟ್ರಗಳ ಸಿರಿವಂತ ಜನರು ತಮ್ಮ ಆರೋಗ್ಯ, ಅಂತಸ್ತು ಮತ್ತು ಪ್ರತಿಷ್ಠೆಯ ದ್ಯೋತಕವಾಗಿ ಬಳಸಲಾರಂಭಿಸಿದ ಶುದ್ಧೀಕರಿಸಿದ ಕುಡಿಯುವ ನೀರಿನ ಬಾಟಲಿಗಳ ಉತ್ಪಾದನೆಯು, ಇಂದು ರಕ್ತಬೀಜಾಸುರನಂತೆ ಬೆಳೆಯುತ್ತಿದೆ. ೨೦೦೬ ರಲ್ಲಿ ಅಮೆರಿಕದ ಪ್ರಜೆಗಳು ೩೧ ಬಿಲಿಯನ್ ಬಾಟಲೀಕೃತ ನೀರನ್ನು ಖರೀದಿಸಲು ೧೧ ಬಿಲಿಯನ್ ಡಾಲರ್ ಗಳನ್ನು ವ್ಯಯಿಸಿದ್ದರು. ಈ ವಿಚಾರದಲ್ಲಿ ಭಾರತೀಯರೂ ಹಿಂದಿಲ್ಲ. ಜಗತ್ತಿನಲ್ಲಿ ಅತ್ಯಧಿಕ ಬಾಟಲೀಕೃತ ನೀರನ್ನು ಬಳಸುವ ದೇಶಗಳ ಪಟ್ಟಿಯಲ್ಲಿ ಭಾರತವು ೧೦ ನೇ ಸ್ಥಾನದಲ್ಲಿದೆ. ೧೯೯೦ ರಲ್ಲಿ ಭಾರತೀಯರು ೨ ಮಿಲಿಯನ್ ನೀರಿನ ಬಾಟಲಿಗಳ ಪೆಟ್ಟಿಗೆಗಳನ್ನು ಖರೀದಿಸಿದ್ದು, ೨೦೦೬ ರಲ್ಲಿ ಇದರ ಪ್ರಮಾಣವು ೬೮ ಮಿಲಿಯನ್ ಪೆಟ್ಟಿಗೆಗಳನ್ನು ತಲುಪಿತ್ತು!. 

ಲೀಟರ್ ಒಂದರ ೧೫ ರೂಪಾಯಿಗಳನ್ನು ತೆತ್ತು ನೀವು ಖರೀದಿಸುವ ಬಾಟಲೀಕೃತ ನೀರಿನ ಪರಿಶುದ್ಧತೆಯ ಬಗ್ಗೆ ಸಾಕಷ್ಟು ವಾದ- ವಿವಾದಗಳೂ ನಡೆದಿವೆ. ಇದೇ ದಶಕದ ಆದಿಯಲ್ಲಿ ಭಾರತದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಸೆಂಟರ್ ಫಾರ್ ಸಯನ್ಸ್ ಎಂಡ್ ಎನ್ವಯರಾನ್ಮೆಂಟ್ ನ ವಿಜ್ಞಾನಿಗಳು, ಭಾರತದಲ್ಲಿ ತಯಾರಿಸಲ್ಪಟ್ಟು ಮಾರಾಟವಾಗುವ ವಿವಿಧ ತಯಾರಕರ ಉತ್ಪನ್ನಗಳನ್ನು ಪರೀಕ್ಷಿಸಿ, ಇವುಗಳು ಪರಿಶುದ್ಧವಾಗಿಲ್ಲ ಎಂದು ಘೋಷಿಸಿದ್ದರು. ಕಳೆದ ತಿಂಗಳಿನಲ್ಲಿ ವಿಶ್ವವಿಖ್ಯಾತ ಬಹುರಾಷ್ಟ್ರೀಯ ಸಂಸ್ಥೆಯೊಂದು (ಅಮೆರಿಕದಲ್ಲಿ ) ತಾನು ಮಾರಾಟ ಮಾಡುತ್ತಿರುವ ಬಾಟಲೀಕೃತ ನೀರು, ಕೇವಲ ನಲ್ಲಿನೀರಲ್ಲದೆ ಬೇರೇನೂ ಅಲ್ಲವೆಂದು ಅನಿವಾರ್ಯವಾಗಿ ಒಪ್ಪಿಕೊಂಡಿತ್ತು. 

ಭಾರತದಲ್ಲಿ ಮಾರಾಟವಾಗುತ್ತಿರುವ ಶುದ್ಧೀಕರಿಸಿದ ಹಾಗೂ ಬಾತಲೀಕರಿಸಿದ ನೀರಿನ ಗುಣಮಟ್ಟ- ಶುದ್ಧತೆಗಳು ನಿಗದಿತ ಮಟ್ಟದಲ್ಲಿ ಇರುವುದಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ "ಐ ಎಸ ಐ" ಪ್ರಮಾಣಪತ್ರವನ್ನು ನೀಡುವ "ಬಿ ಐ ಎಸ" ಸಂಸ್ಥೆಗೆ, ಭಾರತದ ಸಹಸ್ರಾರು ವಾಣಿಜ್ಯ ಸಂಸ್ಥೆಗಳು ತಮ್ಮ ಉತ್ಪನ್ನಗಳಿಗೆ (ಬಾಟಲೀಕೃತ ನೀರಿಗೆ ) ಪ್ರಮಾಣಪತ್ರವನ್ನು ನೀಡುವಂತೆ ಅರ್ಜಿಗಳನ್ನು ಸಲ್ಲಿಸಿವೆ. ಆದರೆ ಈ ಸಂಸ್ಥೆಯ ಬಾಲಿ ನೀರಿನ ಗುಣಮಟ್ಟ ಹಾಗೂ ಶುದ್ಧಾಶುದ್ಧತೆಗಳನ್ನು ಪರೀಕ್ಷಿಸಲು ಅವಶ್ಯಕ ವ್ಯವಸ್ಥೆ- ಸೌಲಭ್ಯಗಳೇ ಇಲ್ಲದಿರುವುದರಿಂದ, ನಮಗೆ ಲಭ್ಯವಾಗುತ್ತಿರುವ ನೀರಿನ ಪರಿಶುದ್ಧತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ!. 

ಲಾಭದಾಯಕ ಉದ್ದಿಮೆ 

ಬಡ ಭಾರತದಲ್ಲಿ ೧೯೯೯-೨೦೦೪ ರ ಅವಧಿಯಲ್ಲಿ ಕುಡಿಯುವ ನೀರಿನ ಬಾಟಲಿಗಳ ಮಾರಾಟವು ಐದು ಪಟ್ಟು ಹೆಚ್ಚಿತ್ತು. ೨೦೦೬ ರಲ್ಲಿ ಅಮೆರಿಕದ ಪ್ರಜೆಗಳು ೩೧ ಬಿಲಿಯನ್ ಲೀಟರ್ ಬಾಟಲೀಕರಿಸಿದ ನೀರಿಗೆ ೧೧ ಬಿಲಿಯನ್ ಡಾಲರ್ ವ್ಯಯಿಸಿದ್ದರು. ವಾರ್ಷಿಕ ಶೇ. ೪೦ ರಷ್ಟು ಬೆಳೆಯುತ್ತಿರುವ, ಸಹಸ್ರಾರು ಕೋತಿ ರೂಪಾಯಿಗಳ ಈ ಉದ್ಯಮವು ಅತ್ಯಂತ ಲಾಭದಾಯಕ ಎನಿಸಿದೆ. ಇದೇ ಕಾರಣದಿಂದ ಭಾರತದಾದ್ಯಂತ ಈಗಾಗಲೇ ೧೦೦೦ ಕ್ಕೂ ಅಧಿಕ ವಾಣಿಜ್ಯ ಸಂಸ್ಥೆಗಳು ಈ ವ್ಯವಹಾರವನ್ನು ಆರಂಭಿಸಿವೆ. 

ಭಾರತದಲ್ಲಿ ಭದ್ರವಾಗಿ ಬೇರೂರಿರುವ ಕೆಲ ಬಹುರಾಷ್ಟ್ರೀಯ ಸಂಸ್ಥೆಗಳು ಅನೇಕ ರಾಜ್ಯಗಳಲ್ಲಿ ಈ ಉದ್ದಿಮೆಯನ್ನು ಆರಂಭಿಸಿ, ಅತ್ಯಲ್ಪ ವೆಚ್ಚದಲ್ಲಿ ಅಪಾರ ಲಾಭವನ್ನು ಗಳಿಸುತ್ತಿವೆ. ಬರಪೀಡಿತ ಜೈಪುರದಲ್ಲಿ ಇಂತಹ ಘಟಕವೊಂದನ್ನು ಆರಂಭಿಸಿರುವ ಬಹುರಾಷ್ಟ್ರೀಯ ಸಂಸ್ಥೆಯೊಂದು ಕೊಳವೆ ಬಾವಿಯನ್ನು ಕೊರೆದು, ಪ್ರತಿನಿತ್ಯ ಲಕ್ಷಾಂತರ ಲೀಟರ್ ಗಳಷ್ಟು ನೀರನ್ನು ಬಳಸುತ್ತಿದೆ. ಅಗಾಧ ಪ್ರಮಾಣದ ನೀರನ್ನು ಬಳಸಿದ್ದಕ್ಕಾಗಿ ಸ್ಥಳೀಯ ಸಂಸ್ಥೆಗೆ ಕೆಲ ವರ್ಷಗಳ ಹಿಂದಿನ ತನಕ ವರ್ಷದಲ್ಲಿ ಕೇವಲ ೨೪ ಸಾವಿರ ರೂಪಾಯಿಗಳನ್ನು ತೆರುತ್ತಿತ್ತು. ಅರ್ಥಾತ್, ಸುಮಾರು ೧೦೦೦ ಲೀಟರ್ ನೀರಿಗೆ ೧೪ ಪೈಸೆ ಶುಲ್ಕವನ್ನು ನೀಡುತ್ತಿತ್ತು. ಅಂದರೆ ತಾನು ಸಿದ್ಧಪಡಿಸುತ್ತಿದ್ದ ಒಂದು ಲೀಟರ್ ಬಾಟಲೀಕೃತ ನೀರಿಗೆ, ಈ ಸಂಸ್ಥೆಯು ೦. ೦೨ ರಿಂದ ೦. ೦೩ ಪೈಸೆಗಳನ್ನು ವ್ಯಯಿಸುತ್ತಿತ್ತು!. 

ಅದೇ ರೀತಿಯಲ್ಲಿ ಈ ನೀರನ್ನು ಶುದ್ಧೀಕರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿದರೂ, ಒಂದು ಲೀಟರ್ ನೀರಿನ ಶುದ್ಧೀಕರಣದ ವೆಚ್ಚ ಕೇವಲ ೨೫ ಪೈಸೆಗಳಾಗುತ್ತವೆ. ಆದರೆ ಈ ನೀರನ್ನು ತುಂಬಿಸಿ ಮಾರಾಟಮಾಡಲು ಬಳಸುವ ಪ್ಲಾಸ್ಟಿಕ್ ಬಾಟಲಿಯೊಂದಕ್ಕೆ ೩ ರಿಂದ ೪ ರೂ. ಹಾಗೂ ಇವುಗಳ ಸಾಗಾಟ ಮತ್ತು ಈ ಉತ್ಪನ್ನದ ಜಾಹೀರಾತುಗಳಿಗಾಗಿ ವ್ಯಯಿಸುವ ಹಣವನ್ನು ಸೇರಿಸಿದ ಬಳಿಕವೂ ತಯಾರಕರಿಗೆ ಈ ವೆಚ್ಚವು ಹೊರೆಯೆನಿಸುವುದಿಲ್ಲ. ಇದೇ ಕಾರಣದಿಂದಾಗಿ ಬಾಟಲಿಯೊಂದಕ್ಕೆ ೧೫ ರೂ. ಗಳಂತೆ ಮಾರಾಟವಾಗುವ ಈ ವಾಣಿಜ್ಯ ಸರಕು, ಇದರ ತಯಾರಕರಿಗೆ ಕೈತುಂಬಾ ಲಾಭವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. 

ವಿಶೇಷವೆಂದರೆ ಸ್ಥಳೀಯ ಸಂಸ್ಥೆಗಳು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ನಮಗೆ ದಿನನಿತ್ಯ ಪೂರೈಸುವ ಶುದ್ಧೀಕರಿಸಿದ ಕುಡಿಯುವ ನೀರಿನ ದರವನ್ನು ಅಪರೂಪದಲ್ಲೊಮ್ಮೆ ಹತ್ತಾರು ರೂಪಾಯಿಗಳಷ್ಟು ಹೆಚ್ಚಿಸಿದಾಗ ತೀವ್ರವಾಗಿ ಪ್ರತಿಭಟಿಸುವ ಜನರು, ದುಬಾರಿ ಬೆಲೆಯನ್ನು ತೆತ್ತು ಬಾಟಲೀಕರಿಸಿದ ನೀರನ್ನು ಖರೀದಿಸಿ ಕುಡಿಯುವುದು ನಂಬಲಸಾಧ್ಯವೆನಿಸುತ್ತದೆ. 

ಅಮೆರಿಕ - ಯುರೋಪ್ ಗಳಲ್ಲಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಸರಬರಾಜು ಮಾಡುವ ನಲ್ಲಿ ನೀರಿನ ಗುಣಮಟ್ಟ ಹಾಗೂ ಪರಿಶುದ್ಧತೆ,  ಅಲ್ಲಿ ದೊರೆಯುವ ಬಾಟಲೀಕೃತ ನೀರಿಗಿಂತಲೂ ಉತ್ತಮವಾಗಿರುತ್ತದೆ. ಏಕೆಂದರೆ ಅಲ್ಲಿನ ಸರಕಾರಗಳು ಇದಕ್ಕೆ ನಿರ್ದಿಷ್ಟ ಮಾನದಂಡಗಳನ್ನು ರೂಪಿಸಿದ್ದು, ಇದನ್ನು ಸಮರ್ಪಕವಾಗಿ ಪರಿಪಾಲಿಸಲಾಗುತ್ತಿದೆಯೇ ಎಂದು ನಿಯಮಿತವಾಗಿ ಪರೀಕ್ಷಿಸಲಾಗುತ್ತದೆ. 

ಪರಿಸರಕ್ಕೆ ಹಿತಕರವಲ್ಲ 

ಶುದ್ಧೀಕರಿಸಿದ ಬಾಟಲೀಕೃತ ನೀರಿನ ಉದ್ದಿಮೆಯಿಂದಾಗಿ ಪೋಲಾಗುವ ಅಗಾಧ ಪ್ರಮಾಣದ ನೀರು,ವಿದ್ಯುತ್ ಶಕ್ತಿ ಹಾಗೂ ಬಾಟಲಿಗಳ ತಯಾರಿಕೆ ಮತ್ತು ಸಾಗಾಟಗಳಿಗಾಗಿ ಬಳಸಲ್ಪಡುವ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಬಳಸಿ ಎಸೆದ ಅಸಂಖ್ಯ ಖಾಲಿ ಬಾಟಲಿಗಳಿಂದ ಸಂಭವಿಸುವ ಪರಿಸರ ಪ್ರದೂಷಣೆ ಹಾಗೂ ತತ್ಪರಿಣಾಮವಾಗಿ ಜಾಗತಿಕ ತಾಪಮಾನದ ಏರಿಕೆಗಳು ಮನುಕುಲಕ್ಕೆ ಮಾರಕವೆನಿಸುತ್ತಿವೆ. ಮಾತ್ರವಲ್ಲ ಶುದ್ಧೀಕರಿಸಿದ ನೀರನ್ನು ಸಿದ್ಧಪಡಿಸುವ ಘಟಕಗಳಿಂದ ಹೊರಬೀಳುವ ತ್ಯಾಜ್ಯಗಳಿಂದ ಸುತ್ತಮುತ್ತಲಿನ ಜಲಮೂಳಗಳೂ ಕಲುಷಿತಗೊಳ್ಳುತ್ತವೆ. ಈ ಅಪಾಯಕಾರೀ ಬೆಳವಣಿಗೆಯನ್ನು ಅಧ್ಯಯನ ಮಾಡಿರುವ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು, ಈ ಸಮಸ್ಯೆಯ ನಿವಾರಣೆಯತ್ತ ಗಮನಹರಿಸುತ್ತಿವೆ. 

ಅಮೆರಿಕದ ಸಾನ್ಫ್ರಾನ್ಸಿಸ್ಕೋ  ನಗರದ ಸರಕಾರೀ ಕಚೇರಿಗಳಲ್ಲಿ ಬಾಟಲೀಕೃತ ನೀರಿನ ಬಳಕೆಯನ್ನು ಇತ್ತೀಚಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಏಕೆಂದರೆ ಅಮೆರಿಕದಲ್ಲಿ ದಿನನಿತ್ಯ ೬೦ ಮಿಲಿಯನ್ ನೀರಿನ ಬಾಟಲಿಗಳನ್ನು ಬಳಸಿ ಎಸೆಯಲಾಗುತ್ತಿದ್ದು, ಇವುಗಳನ್ನು ಸಂಗ್ರಹಿಸಿ ಸಮರ್ಪಕವಾಗಿ ವಿಲೇವಾರಿ ಮಾಡುವುದು ಮತ್ತು  ಇವುಗಳಿಂದ ಸಂಭವಿಸುವ ಪರಿಸರ ಪ್ರದೂಷಣೆ, ಸರಕಾರಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸಾಲ್ಟ್ ಲೇಕ್ ಸಿಟಿಯ ಸರಕಾರೀ ನೌಕರರು ಯಾವುದೇ ಸಭೆ- ಸಮಾರಂಭಗಳಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಪೂರೈಸದಂತೆ ಅಲ್ಲಿನ ಮೇಯರ್ ಗತವರ್ಷದಲ್ಲಿ ಕರೆನೀಡಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿನ ವಿಲಾಸಿ ಹೋಟೆಲ್ ಗಳು ಬಾಟಲೀಕೃತ ನೀರನ್ನು ಗ್ರಾಹಕರಿಗೆ ಸರಬರಾಜು ಮಾಡುವುದನ್ನೇ ನಿಲ್ಲಿಸಿದ್ದವು. 

ಬಾಟಲೀಕೃತ ನೀರನ್ನು ದುಬಾರಿ ಬೆಲೆಯನ್ನು ತೆತ್ತು ಖರೀದಿಸಿ ಕುಡಿಯುವುದನ್ನು ನಾವು ಪಾಶ್ಚಾತ್ಯರಿಂದ ಕಲಿತಿರುವುದು ಸತ್ಯ. ಆದರೆ ಇದರಿಂದಾಗಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಪಾಶ್ಚಾತ್ಯರು ಕೈಗೊಂಡಿರುವ ನಿರ್ದಾಕ್ಷಿಣ್ಯ ಹಾಗೂ ಕಠಿಣ ಕ್ರಮಗಳನ್ನು ಅನುಕರಿಸಲು ಹಿಂಜರಿಯುವುದು ಏಕೆ?, ಎನ್ನುವ ಪ್ರಶ್ನೆಗೆ ಉತ್ತರ ದೊರೆಯುವ ಸಾಧ್ಯತೆಗಳೇ ಇಲ್ಲ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಈ ಲೇಖನದಲ್ಲಿ ಪ್ರಕಟಿತ ಅಂಕಿಅಂಶಗಳು ೨೦೦೬ ರಲ್ಲಿ ಇದನ್ನು ಬರೆಯುವಾಗ ಲಭಿಸಿದ್ದವು. 

ಉದಯವಾಣಿ ಪತ್ರಿಕೆಯ ದಿ. ೧೩-೦೯- ೨೦೦೭ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 

No comments:

Post a Comment