Thursday, October 24, 2013

Paripoorna purushatvavannu padeyiri!-be a macho man! Part-2


                 ಪರಿಪೂರ್ಣ ಪುರುಷತ್ವವನ್ನು ಪಡೆಯಿರಿ!  ಭಾಗ-೨

ನಿಮಿರು ದೌರ್ಬಲ್ಯಕ್ಕೆ"ಸ್ಪ್ರೇ" ಮದ್ದಲ್ಲ!

ರಸಿಕ ರತ್ನಾಕರ ಎಂದೇ ಪ್ರಸಿದ್ಧರಾಗಿರುವ ಆನಂದಮೂರ್ತಿಯವರು "ಸ್ವಯಂ ಚಿಕಿತ್ಸೆ" ಯಲ್ಲಿ ಪರಿಣಿತರು. ಅರವತ್ತರ ಹರೆಯದಲ್ಲೂ ಮೂರ್ತಿಯವರ ಕಾಮಾಸಕ್ತಿ ಕಿಂಚಿತ್ ಕೂಡಾ ಕ್ಷಯಿಸಿರಲಿಲ್ಲ. ತಮ್ಮ ಲೈಂಗಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು "ಮದನಕಾಮೇಶ್ವರಿ ಲೇಹ್ಯ", ಸ್ವರ್ಣ ಭಸ್ಮ ಹಾಗೂ ಇತರ ಕೆಲ ಔಷದಗಳನ್ನು  ಸೇವಿಸುವ ಹವ್ಯಾಸವು ಹಲವಾರು ವರ್ಷಗಳಿಂದ ಇವರಲ್ಲಿತ್ತು. 

ಆದರೆ ಇತ್ತೀಚಿನ ಕೆಲ ತಿಂಗಳುಗಳಿಂದ ಸತತವಾಗಿ ಬಾಧಿಸುತ್ತಿದ್ದ ನಿಮಿರು ದೌರ್ಬಲ್ಯದ ಸಮಸ್ಯೆಯನ್ನು ಪರಿಹರಿಸಲು, ವೃತ್ತ ಪತ್ರಿಕೆಯಾ ಜಾಹೀರಾತಿನಲ್ಲಿ ಕಂಡಿದ್ದ ಅದ್ಭುತ "ಸ್ಪ್ರೇ " ಒಂದನ್ನು ಖರೀದಿಸಿದರು. ಹತ್ತರುಬಾರಿ ಇದನ್ನು ಬಳಸಿದಾಗಳೂ ನಿರೀಕ್ಷಿತ ಪರಿಣಾಮ ದೊರೆಯದಾಗ, ಪರಿಚಿತ ವೈದ್ಯರ ಸಲಹೆಯನ್ನು ಪಡೆಯಲು ತೆರಳಿದ್ದರು. 

ಬಹುತೇಕ ಜನರು ಇಂತಹ ಜಾಹೀರಾತುಗಳನ್ನು ಕಂಡು, ಇದು ಕಾಮೋತ್ತೇಜಕ ಹಾಗೂ ನಿಮಿರು ದೌರ್ಬಲ್ಯಕ್ಕೆ ರಾಮಬಾಣ ಎಂದು ಭಾವಿಸುತ್ತಾರೆ. ಸತ್ಯ ಸಂಗತಿ ಏನೆಂದರೆ ಈ ಸ್ಪ್ರೇ ಯನ್ನು ಬಳಸಿದಾಗ ಶಿಶ್ನದ ತುದಿಯ ಭಾಗದ ಸಂವೇದನೆಗಳು ತಾತ್ಕಾಲಿಕವಾಗಿ ತಡೆಗಟ್ಟಲ್ಪದುವುದರಿಂದ, ಶೀಘ್ರ ಸ್ಖಲನದ ಸಮಸ್ಯೆಗೆ ಕಿಂಚಿತ್ ಪರಿಹಾರ ಲಭಿಸುತ್ತದೆ. ಅರಿವಲಿಕೆಗಾಗಿ ಉಪಯೋಗಿಸುವ ಔಷದವನ್ನು ನೇರವಾಗಿ ಶಿಶ್ನಕ್ಕೆ ಸಿಂಪಡಿಸುವುದರಿಂದ, ಈ ಭಾಗವು ನೋವು ಮತ್ತು ಸ್ಪರ್ಶಜ್ಞಾನವನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುವುದು. ತತ್ಪರಿಣಾಮವಾಗಿ ಸಂಭೋಗದ ಅವಧಿ ಒಂದಿಷ್ಟು ಹೆಚ್ಚುವುದು!. ಈ ವಿಚಾರವನ್ನು ಅರಿತಿರದ ಅನೇಕರು ಇಂತಹ ರೆಚಕಗಳ ಅದ್ಭುತ ಪರಿಣಾಮಗಳ ಬಗ್ಗೆ, ಅರ್ಥಾತ್ ಇದರಿಂದಾಗಿ ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿರುವ ಬಗ್ಗೆ ಬೊಗಳೆ ಬಿಡುವುದು ಸುಳ್ಳೇನಲ್ಲ!. 
   ವೀರ್ಯ ಸ್ಖಲನದ ಸಮಸ್ಯೆಗಳು 

ಬ್ಬಹುತೇಕ ಪುರುಷರು ಬಯಸುವ ರತಿಕ್ರೀಡೆಯ ಉತ್ತುಂಗ ಸ್ಥಿತಿಯನ್ನು ತಲುಪುವ ತನಕ ವೀರ್ಯಸ್ಖಲನವನ್ನು ಹತೋಟಿಯಲ್ಲಿಡುವ ಅಪೇಕ್ಷೆಯು, ಅನೇಕರಲ್ಲಿ ನಿರಾಸೆಯಲ್ಲಿ ಪರ್ಯವಸಾನವಾಗುವುದುಂಟು. ಈ ಸಮಸ್ಯೆಯಲ್ಲಿ ಶೀಘ್ರ ಸ್ಖಲನ ಹಾಗೂ ವಿಲಂಬಿತ ಸ್ಖಲನ ಅಥವಾ ಸ್ಖಲನದ ಅಭಾವಗಳೆಂದು ಎರಡು ವಿಧಗಳಿವೆ. 

ಸಂಭೋಗದ ಸಮಯದಲ್ಲಿ ಶಿಶ್ನವು ಯೋನಿಯನ್ನು ಪ್ರವೇಶಿಸುವ ಮೊದಲೇ ಅಥವಾ ಪ್ರವೇಶಿಸಿದೊಡನೆ ಆಗುವ ವೀರ್ಯ ಸ್ಖಲನವನ್ನು ಶೀಘ್ರ ಸ್ಖಲನವೆನ್ನುತ್ತಾರೆ. ಅತ್ಯಧಿಕ ಜನರನ್ನು ಬಾಧಿಸುವ ಶೀಘ್ರ ಸ್ಖಲನದ ಸಮಸ್ಯೆಯು ಸಹಸ್ರಾರು ಪುರುಷರ ನಿದ್ರಾಹೀನತೆ ಹಾಗೂ ಮಾನಸಿಕ ಖಿನ್ನತೆಗೆ ಕಾರಣವೆನಿಸಿದೆ. ಆದರೆ ಲೈಂಗಿಕ ವಿಜ್ಞಾನದ ಕಿಂಚಿತ್ ಅರಿವೂ ಇಲ್ಲದ ವಿದ್ಯಾವಂತರೂ, ಈ ಸಮಸ್ಯೆಯನ್ನು ಗಂಭೀರ ಕಾಯಿಲೆಯಂತೆ ಪರಿಗಣಿಸಿ ತಮ್ಮ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. 

ಸಾಮಾನ್ಯವಾಗಿ ರತಿಸುಖದ ಅನುಭವವೇ ಇಲ್ಲದ ಪುರುಷರಿಗೆ ಪ್ರಥಮ ಸಮಾಗಮದ ಸಂದರ್ಭದಲ್ಲಿ ಇರಬಹುದಾದ ಭಯಮಿಶ್ರಿತ ಕುತೂಹಲ, ಒಂದಿಷ್ಟು ಸಂಕೋಚ, ಕಿಂಚಿತ್ ಉದ್ವೆಗದೊಂದಿಗೆ ಅನಿರ್ವಚನೀಯ ಆನಂದದ ಅನುಭವ ಸವಿಯುವ ಕಾತುರವೇ ಶೀಘ್ರ ಸ್ಖಲನಕ್ಕೆ ಕಾರಣವೆನಿಸಬಲ್ಲದು. ಕೆಲವೇ ದಿನ ಅಥವಾ ವಾರಗಳಲ್ಲಿ ತಾನಾಗಿ ಶಮನಗೊಳ್ಳುವ ಈ ಸಮಸ್ಯೆಯನ್ನೇ ಗಂಭೀರವಾಗಿ ಪರಿಗಣಿಸಿದಲ್ಲಿ, ಮಾನಸಿಕ ಒತ್ತಡ ಹೆಚ್ಚಾಗಿ ಇದರ ಪುನರಾವರ್ತನೆಯಾಗುವ ಸಾಧ್ಯತೆಗಳೇ ಹೆಚ್ಚು!. 

ಶೀಘ್ರ ಸ್ಖಲನಕ್ಕೆ ಕಾರಣಗಳೇನು?

ಶಿಶ್ನದ ಬುಡದ ಸುತ್ತಲೂ ಇರುವ ಮಾಂಸಪೇಶಿಗಳು ಅತೀ ಕ್ರಿಯಾಶೀಲವಾಗಿರುವ ಪರಿಣಾಮದಿಂದಾಗಿ ಶೀಘ್ರ ಸ್ಖಲನ ಸಂಭವಿಸುತ್ತದೆ. ಜೊತೆಗೆ ಯಾವುದೇ ವ್ಯಕ್ತಿ ಈ ಪ್ರಕ್ರಿಯೆಯನ್ನು ತಾನು ಬಯಸಿದಂತೆ ಹತೋಟಿಯಲ್ಲಿ ಇರಿಸುವುದು ಅಸಾಧ್ಯವಾಗಿರುವುದೂ ಮುಖ್ಯ ಕಾರಣವೆನ್ನಬಹುದು.

ಇದಲ್ಲದೇ ಕದ್ದುಮುಚ್ಚಿ ನಡೆಸುವ ಸಂಭೋಗ, ಗರ್ಭಧಾರಣೆಯ ಭೀತಿ, ತನ್ನ ಲೈಂಗಿಕ ಸಾಮರ್ಥ್ಯದ ಬಗ್ಗೆ ಇರುವ ಅವಿಶ್ವಾಸ, ಬಾಲ್ಯ- ಹದಿಹರೆಯದಲ್ಲಿ ಇದ್ದಿರಬಹುದಾದ ಅನೈತಿಕ ಸಂಬಂಧಗಳು(ಯಾರಿಗೂ ಪತ್ತೆಯಾಗದಂತೆ ಗುಟ್ಟಾಗಿ ಮತ್ತು ಕ್ಷಿಪ್ರವಾಗಿ ಮುಗಿಸುವ ಸಂಭೋಗ ಕ್ರಿಯೆ) ಮತ್ತು ಸಂಗಾತಿಯೊಂದಿಗೆ ಸಂಬಂಧದ ಸಮಸ್ಯೆಗಳು ಹೆಚ್ಚಾಗಿ ಶೀಘ್ರ ಸ್ಖಲನಕ್ಕೆ ಕಾರಣವೆನಿಸುತ್ತವೆ. ಶೇ. ೩೦ ರಿಂದ ೩೫ ಪುರುಷರಲ್ಲಿ ಕಂಡುಬರುವ ಈ ಸಮಸ್ಯೆಯು, ತನ್ನನ್ನು ಕಾಡುತ್ತಿದೆ ಎಂದು ಹೇಳಲು ಯಾವ ಪುರುಷರೂ ಸಿದ್ಧರಿಲ್ಲ!. 

ವಿಳಂಬಿತ ಸ್ಖಲನ 

ಅತ್ಯಂತ ಅಪರೂಪವಾಗಿರುವ ಈ ಸಮಸ್ಯೆಯಲ್ಲಿ ರತಿಕ್ರೀಡೆಯ ಅಂತ್ಯದಲ್ಲಿ ಸ್ಖಲನವಾಗದಿರುವುದು ಅಥವಾ ವಿಳಂಬವಾಗಿ ವೀರ್ಯ ಸ್ಖಲನವಾಗುವುದು. ಈ ತೊಂದರೆಗೆ ನಿರ್ದಿಷ್ಟ ಕಾರಣಗಳಿಲ್ಲದಿದ್ದರೂ, ಮಾನಸಿಕ ಕಾರಣಗಳಿರುವ ಸಾಧ್ಯತೆಯೇ ಹೆಚ್ಚು. ತನ್ನ ಲೈಂಗಿಕ ಸಾಮರ್ಥ್ಯದ ಬಗ್ಗೆ ಅಧೈರ್ಯ, ಪತಿ- ಪತ್ನಿಯರ ಸಂಬಂಧದಲ್ಲಿ ತೊಡಕುಗಳು, ವೃದ್ಧಾಪ್ಯ, ಕೆಲವೊಂದು ಔಷದಗಳ ಸೇವನೆ, ಹಾರ್ಮೋನ್ ಗಳ ವ್ಯತ್ಯಯ, ಮಧುಮೇಹ ಹಾಗೂ ಸೊಂಟದ ಭಾಗದಲ್ಲಿನ ನರಗಳು ಹಾಗೂ ಮಾಂಸಪೇಶಿಗಳಿಗೆ ಆಗಿರುವ ಆಘಾತ ಮತ್ತು ಶಸ್ತ್ರಚಿಕಿತ್ಸೆಗಳೂ ಇದಕ್ಕೆ ಕಾರಣವೆನಿಸುವ ಸಾಧ್ಯತೆಗಳಿವೆ. ವಿಶೇಷವೆಂದರೆ ಇಂತಹ ವ್ಯಕ್ತಿಗಳಿಗೆ ಮುಷ್ಟಿ ಮೈಥುನ ಅಥವಾ ಮುಖ ಮೈತುನಗಳ ಸಂದರ್ಭಗಳಲ್ಲಿ ಸ್ವಾಭಾವಿಕವಾಗಿ ವೀರ್ಯ ಸ್ಖಲನವಾಗುವುದುಂಟು!. 

ಅನೇಕ ಜನರ ದಾಂಪತ್ಯ ಜೀವನಕ್ಕೆ ಮುಳುವಾಗಿರುವ,ವಿವಾಹ ವಿಚ್ಛೇದನ ಹಾಗೂ ಅನೈತಿಕ ಸಂಬಂಧಗಳಿಗೂ ಕಾರಣವೆನಿಸಿರುವ ಇಂತಹ ಲೈಂಗಿಕ ಸಮಸ್ಯೆಗಳನ್ನು ಸೂಕ್ತ ಸಮಯದಲ್ಲಿ, ತಜ್ಞ ವೈದ್ಯರಿಂದ ಸಮರ್ಪಕ ಚಿಕಿತ್ಸೆಯನ್ನು ಪಡೆದಲ್ಲಿ ಸುಲಭದಲ್ಲೇ ಪರಿಹರಿಸಿಕೊಳ್ಳಬಹುದಾಗಿದೆ. 

ಆದರೆ "ಸ್ವಯಂ ಘೋಷಿತ ಲೈಂಗಿಕ ತಜ್ಞ "ರು ಈ ಸಮಸ್ಯೆಯನ್ನೇ ಭೀಕರವಾಗಿ ಚಿತ್ರಿಸಿ, ಅಮಾಯಕರಿಂದ ಸಹಸ್ರಾರು ರೂಪಾಯಿಗಳನ್ನು ಸುಲಿಗೆ ಮಾಡುತ್ತಾರೆ. ಈ ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಿ ಸುಲಭದಲ್ಲೇ ಪರಿಹರಿಸಬಹುದಾಗಿದೆ. ಇದಕ್ಕೆ ಮಾನಸಿಕ ಒತ್ತಡ ಕಾರಣವಾಗಿದ್ದಲ್ಲಿ ಆಪ್ತ ಸಂವಾದದ ಮೂಲಕ,  ಯಾವುದೇ ಔಷದಗಳನ್ನು ಸೇವಿಸದೇ ಬಗೆಹರಿಸಬಹುದು. 

ಚಿಕಿತ್ಸೆ ಅವಶ್ಯಕವೇ?

ಮನುಷ್ಯನ ಆರೋಗ್ಯದ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಮೊದಲು ಕಾಯಿಲೆಯನ್ನು ನಿಖರವಾಗಿ ಪತ್ತೆಹಚ್ಚುವುದು ಮತ್ತು ಇದರ ಮೂಲಕಾರಣವನ್ನು ಕಂಡುಹಿಡಿಯುವುದು ಅತ್ಯಗತ್ಯ. ಇದೇ ಕಾರಣದಿಂದಾಗಿ ಲೈಂಗಿಕ ಸಮಸ್ಯೆಗಳಲ್ಲಿ ಮಾನಸಿಕ ಕಾರಣಗಳಿಂದ ಉದ್ಭವಿಸಿರುವ ಸಮಸ್ಯೆಗಳಿಗೆ, ನೀವು ಜಾಹೀರಾತುಗಳಲ್ಲಿ ಕಂಡಿರಬಹುದಾದ ಅದ್ಭುತ ಲೈಂಗಿಕ ಶಕ್ತಿವರ್ಧಕಗಳು ಅಥವಾ ವಯಾಗ್ರಾ ದಂತಹ ಮಾತ್ರೆಗಳು ಯಾವುದೇ ಪರಿಣಾಮವನ್ನು ನೀಡಲಾರವು. ಆದರೆ ಶಾರೀರಿಕ ಕಾರಣಗಳಿಂದ ಉಂಟಾದ ಸಮಸ್ಯೆಗಳಲ್ಲಿ ಕೆಲವೊಮ್ಮೆ ನಿಮ್ಮ ಆತ್ಮವಿಶ್ವಾಸವೇ ನಶಿಸಿರುವ ಸಾಧ್ಯತೆಗಳಿರುವುದರಿಂದ, ಅವಶ್ಯಕ ಔಷದಗಳೊಂದಿಗೆ ಮಾನಸಿಕ ತಜ್ಞರ ಅಥವಾ ಆಪ್ತ ಸಂವಾದಕರ ಚಿಕಿತ್ಸೆಯೂ ಅವಶ್ಯಕವೆನಿಸಬಹುದು. ಉದಾಹರಣೆಗೆ ನಿಮ್ಮ ಶರೀರದಲ್ಲಿ ಉತ್ಪನ್ನವಾಗುವ ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಪ್ರಮಾಣವು ತೀವ್ರವಾಗಿ ಕಡಿಮೆಯಿದ್ದಲ್ಲಿ, ಸ್ವಯಂ ಚಿಕಿತ್ಸೆಯ ಅಂಗವಾಗಿ ನೀವು ಸೇವಿಸುವ "ಲೈಂಗಿಕ ಶಕ್ತಿವರ್ಧಕ"ಗಳು ನಿರೀಕ್ಷಿತ ಪರಿಣಾಮವನ್ನು ಬೀರಲಾರವು. ತತ್ಪರಿಣಾಮವಾಗಿ ಉದ್ಭವಿಸಬಲ್ಲ ಮಾನಸಿಕ ಒತ್ತಡ ಅತಿಯಾದಲ್ಲಿ, ನಿಮಗೆ ಹಾರ್ಮೋನ್ ಚಿಕಿತ್ಸೆಯೊಂದಿಗೆ ಮಾನಸಿಕ ತಜ್ಞರ ಅಥವಾ ಆಪ್ತ ಸಂವಾದಕರ ಚಿಕಿತ್ಸೆಯನ್ನೂ ನೀಡಬೇಕಾಗುವುದು. 

ಕಾಮಾಸಕ್ತಿಯ ಕೊರತೆ, ನಿಮಿರು ದೌರ್ಬಲ್ಯ ಮತ್ತು ಶೀಘ್ರ ಸ್ಖಲನಗಳಿಗೆ ಅತ್ಯುತ್ತಮ ಚಿಕಿತ್ಸೆ ಲಭ್ಯವಿದೆ. ಮಾತ್ರೆಗಳು,ಕ್ಯಾಪ್ಸೂಲ್ ಗಳು, ಹಾರ್ಮೋನ್ ಇಂಜೆಕ್ಷನ್ ಗಳು, ವಿವಿಧ ರೀತಿಯ ರೇಚಕಗಳು,ಶಿಶ್ನಕ್ಕೆ ನೀಡುವ ಇಂಜೆಕ್ಷನ್ ಗಳು ಮತ್ತು ಶಿಶ್ನದಲ್ಲಿ ಇರಿಸಬಹುದಾದ ನಿಮಿರುಕಾರಕಗಳೇ ಮುಂತಾದ ವೈವಿಧ್ಯಮಯ ಚಿಕಿತ್ಸೆಗಳೂ ಇವೆ. 


ಲೈಂಗಿಕ ಸಮಸ್ಯೆಗಳು ಆರಂಭವಾದೊಡನೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಈ ಬಗ್ಗೆ ಸಂವಾದ ನಡೆಸುವುದು ಹಿತಕರ. ಅಂತೆಯೇ ನಿಮ್ಮ ನಂಬಿಗಸ್ತ ಕುಟುಂಬ ವೈದ್ಯರ ಸಲಹೆ ಪಡೆದು, ಸಂದರ್ಭೋಚಿತವಾಗಿ ಸೂಕ್ತ ತಜ್ಞ ವೈದ್ಯರ ಚಿಕಿತ್ಸೆ ಪಡೆಯುವುದು ಉತ್ತಮ. 

ನಿಮ್ಮ ಸಮಸ್ಯೆಗಳಿಗೆ ಕಾರಣವಾಗಿರಬಹುದಾದ ವಿವಿಧ ಕಾಯಿಲೆಗಳ ಸಮರ್ಪಕ ನಿಯಂತ್ರಣ, ಶಾರೀರಿಕ ವ್ಯಾಯಾಮ- ಕ್ರೀಡೆಗಳಲ್ಲಿ ಭಾಗವಹಿಸುವುದು, ಮಾನಸಿಕ ನೆಮ್ಮದಿಗಾಗಿ ಧ್ಯಾನ- ಯೋಗ ಹಾಗೂ ಸಂಗೀತಗಳಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ. ಮಾದಕ ದ್ರವ್ಯಗಳ ಸೇವನೆ, ಅತಿ ಮದ್ಯ- ಧೂಮಪಾನಗಳ ವರ್ಜನೆ ಚಿಕಿತ್ಸೆಯ ಪ್ರಾಥಮಿಕ ಅವಶ್ಯಕತೆಯೂ ಹೌದು. ಜೀವನ ಶೈಲಿ ಹಾಗೂ ಆಹಾರ ಸೇವನಾ ಶೈಲಿಗಳಲ್ಲಿ ಅವಶ್ಯಕ ಬದಲಾವಣೆ ಅನಿವಾರ್ಯ. ಇವೆಲ್ಲವುಗಳೊಂದಿಗೆ ತಜ್ಞ ವೈದ್ಯರು ಸೂಚಿಸಿದ ಔಷದಗಳನ್ನು ಕ್ರಮಬದ್ಧವಾಗಿ ಸೇವಿಸುವುದು ನಿಶ್ಚಿತವಾಗಿಯೂ ಅಪೇಕ್ಷಿತ ಪರಿಣಾಮವನ್ನು ನೀಡಬಲ್ಲದು.  

ವೃದ್ಧಾಪ್ಯ ಮತ್ತು ಕಾಮೇಚ್ಛೆ 

"ಹುಣಸೇಮರ ಮುಪ್ಪಾದರೂ ಹುಳಿ ಮುಪ್ಪಾಗದು" ಎಂಬ ಗಾದೆಮಾತು ಅನೇಕ ವೃದ್ಧರ ಲೈಂಗಿಕ ಆಸಕ್ತಿ ಮತ್ತು ಚಟುವಟಿಕೆಗಳಿಗೆ ನೇರವಾಗಿ ಅನ್ವಯಿಸುವುದು ನಿಜ. ವೃದ್ಧಾಪ್ಯದಲ್ಲೂ ಶಾರೀರಿಕ ಮತ್ತು ಲೈಂಗಿಕ ಆರೋಗ್ಯಗಳು ಅತ್ಯುತ್ತಮವಿರುವ ವ್ಯಕ್ತಿಗಳ ಬಗ್ಗೆ "ಮಗಳಿಗೆ ಮದುವೆಯಾದರೂ, ಮುದುಕನಿಗೆ ರತಿಕ್ರೀಡೆಯ ಹುಚ್ಚು ಬಿಟ್ಟಿಲ್ಲ" ಎಂದು ಇಂಥವರ ಪತ್ನಿಯರೇ ಹೇಳುವುದುಂಟು!. 

ಭಾರತೀಯ ನಾರಿಯರು ಮಾಸಿಕ ರಜೋಸ್ರಾವ ನಿಂತೊಡನೆ ತಮ್ಮ ಸುರತ ಸುಖಕ್ಕೆ ವಿದಾಯ ಹೇಳುವುದು ಸಹಜ. ಆದರೆ ೬೦ ವರ್ಷ ವಯಸ್ಸಿನಲ್ಲೂ ಕ್ರಮಬದ್ಧವಾಗಿ ಮುಟ್ಟಾಗುವ ಸ್ತ್ರೀಯರೂ ಕಾಮಾಸಕ್ತಿ ಕಳೆದುಕೊಳ್ಳುವುದು ಕೂಡಾ ಅಪರೂಪವೇನಲ್ಲ. 

ಆದರೆ ಆರೋಗ್ಯವಂತ ಪುರುಷರಲ್ಲಿ ವಯಸ್ಸಾದಂತೆಯೇ ಕಾಮೇಚ್ಛೆ ಹೆಚ್ಚುವ ಸಾಧ್ಯತೆಗಳೂ ಇವೆ. ಈ ಸಂದರ್ಭದಲ್ಲಿ ವಯಸ್ಸಾದ ಪತ್ನಿಗೆ ರಜೋಸ್ರಾವ ನಿಂತ ಕಾರಣದಿಂದಾಗಿ ಸಂಭೋಗದ ಸಮಯದಲ್ಲಿ ಒಂದಿಷ್ಟು ನೋವು ಬಾಧಿಸಬಹುದು. ಇದರ ನಿವಾರಣೆಗಾಗಿ ವೈದ್ಯರು ಸೂಚಿಸುವ ಮುಲಾಮುಗಳನ್ನು ಬಳಸಿ, ವೇದನಾ ರಹಿತ ಸುರತ ಸುಖವನ್ನು ಅನುಭವಿಸುವುದು ಸುಲಭ ಸಾಧ್ಯ. 

ಸ್ತ್ರೀ-ಪುರುಷರಿಬ್ಬರೂ ತಮ್ಮ ವಯಸ್ಸು ಹಾಗೂ ತಮ್ಮ ಶರೀರ ಮತ್ತು ಮನಸ್ಸುಗಳು ಬಯಸುವ ಸುರತ ಸುಖಕ್ಕೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಇಂತಹ ಕ್ಷುಲ್ಲಕ ಕಾರಣಗಳಿಂದ ದಾಂಪತ್ಯ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದು ಸರಿಯಲ್ಲ ಎನ್ನುವುದನ್ನು ಮರೆಯದಿರಿ. 

ಅಂತಿಮವಾಗಿ ಆರೋಗ್ಯಕರ ಜೀವನ ಶೈಲಿಯನ್ನು ಪರಿಪಾಲಿಸುವ, ದೈಹಿಕ ಹಾಗೂ ಮಾನಸಿಕ ಕ್ಷಮತೆಗಳ ಮಟ್ಟ ಉತ್ತಮವಾಗಿರುವ, ಪರಸ್ಪರ ಹೊಂದಾಣಿಕೆ ತೃಪ್ತಿಕರವಾಗಿರುವ ದಂಪತಿಗಳಲ್ಲಿ ಲೈಂಗಿಕ ಸಮಸ್ಯೆಗಳು ಕಂಡುಬರುವುದಿಲ್ಲ ಎನ್ನುವುದು ನೆನಪಿರಲಿ!. 

ಡಾ. ಸಿ. ನಿತ್ಯಾನಂದ ಪೈ, ಪುತ್ತೂರು 

ಉದಯವಾಣಿ ಪತ್ರಿಕೆಯ ದಿ. ೧೮-೧೨-೨೦೦೩ ರ ಸಂಚಿಕೆಯ ಅಂಕಣದಲ್ಲಿ ಪ್ರಕಟಿತ ಲೇಖನ 


No comments:

Post a Comment